ಚಳ್ಳಕೆರೆ: ಬಿಸಿಯೂಟ ಯೋಜನೆ ಮಕ್ಕಳಲ್ಲಿನ ಪೌಷ್ಟಿಕತೆ ಮತ್ತು ಉತ್ತಮ ಕಲಿಕೆಗೆ ಸಹಕಾರಿ ಆಗಿದೆ ಎಂದು ಬಿಇಒ ಕೆ.ಎಸ್.ಸುರೇಶ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಸಹಯೋಗದಲ್ಲಿ ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಲೆಕ್ಕ ಪರಿಶೋಧನೆಯಿಂದ ಯೋಜನೆ ಗುಣಮಟ್ಟ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಪ್ರತಿ ಶಾಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಗೆ ಸಹಕರಿಸಬೇಕು. ಬಿಸಿಯೂಟ ಯೋಜನೆ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸಾರ್ವತ್ರಿಕಗೊಳಿಸಲು ಅನುಕೂಲವಾಗಿದೆ ಎಂದರು.
ದಾಖಲಾತಿ ಹೆಚ್ಚಳ ಮತ್ತು ಬಡಮಕ್ಕಳ ಶಿಕ್ಷಣಕ್ಕೆ ಬಿಸಿಯೂಟ ಯೋಜನೆ ಪೂರಕವಾಗಿದೆ. ಶಾಲೆಯಲ್ಲಿನ 750 ಮಕ್ಕಳಿಗೆ ಅಡುಗೆ ತಯಾರಿಸಿ ಉಣಬಡಿಸುವ ನಿರ್ವಹಣೆ ದೊಡ್ಡ ಜವಾಬ್ದಾರಿ. ಬಿಸಿಯೂಟ ತಯಾರಿಕೆಯಲ್ಲಿ ಹೆಚ್ಚಿನ ಕಾಳಜಿ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಜಾಗೃತಿ ಇರಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ಬಿ.ಕೆ.ಮಾಧವ ಮಾತನಾಡಿ, ಮಕ್ಕಳ ಆರೋಗ್ಯ ದೃಷ್ಟಿಯಿಂದ ಬಿಸಿಯೂಟ ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳ ಪ್ರಗತಿಪರ ಕಲಿಕೆಗೆ ಶಿಕ್ಷಣ ಜತೆಯಲ್ಲಿ ಕಸೂತಿ ಚಟುವಟಿಕೆ ಮಾಡಲಾಗುತ್ತಿದೆ. ಕರಕುಶಲತೆ, ಚಿತ್ರಕಲೆ ಬದುಕಿನ ಸಾಮಾಜಿಕ ನಿರ್ವಹಣೆಗೆ ಆಧಾರವಾಗುತ್ತದೆ. ಈಗಾಗಲೇ ಮಕ್ಕಳ ಆಸಕ್ತಿಯಂತೆ ಕಸೂತಿ ಚಟುವಟಿಕೆಗಳು ಶಾಲೆಯಲ್ಲಿ ಆರಂಭ ಮಾಡಲಾಗಿದೆ ಎಂದರು.
ರಾಜ್ಯಮಟ್ಟದ ಶಾಟ್ಪುಟ್ ಕ್ರೀಡೆಗೆ ಆಯ್ಕೆಯಾದ ಅಂಗವಿಕಲೆ ವಿದ್ಯಾರ್ಥಿನಿ ಉಮಿತಾಜ್ ಅವರನ್ನು ಗೌರವಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜ್ಕುಮಾರ್, ಸಾಮಾಜಿಕ ಲೆಕ್ಕ ಪರಿಶೋಧಕ ಗಿರೀಶ್, ಶಾಲಾ ಸಮಿತಿ ಉಪಾಧ್ಯಕ್ಷೆ ಲತಾ, ಸದಸ್ಯರಾದ ಮಂಜುಳಾ, ಕವಿತಾ, ಶಿಕ್ಷಕರಾದ ಶಿವಕೀರ್ತಿ, ಪ್ರದೀಪ್, ಉಮಾ, ಸುಜಾತಾ, ಪ್ರಾಣೇಶ, ಪ್ರಕಾಶ್ ಮತ್ತಿತರರಿದ್ದರು.