More

    ಚೀನಾದ ನಷ್ಟ ಭಾರತಕ್ಕೆ ಲಾಭವಾಗಬಹುದೇ?!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ

    ಚೀನಾದ ನಷ್ಟ ಭಾರತಕ್ಕೆ ಲಾಭವಾಗಬಹುದೇ?!; ಚಕ್ರವರ್ತಿ ಸೂಲಿಬೆಲೆ ಅವರ ಅಂಕಣ

    ಚೀನಾದ ನಷ್ಟ ಭಾರತಕ್ಕೆ ಲಾಭವಾಗಬೇಕು. ಜಗತ್ತನ್ನು ಆಕರ್ಷಿಸುವ, ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರವಾಗಿ ಭಾರತ ರೂಪುಗೊಳ್ಳಬೇಕು. ಜಗತ್ತಿನ ಜನರನ್ನು ನೆಮ್ಮದಿಯತ್ತ, ಶಾಂತಿಯತ್ತ ಕರೆದೊಯ್ಯಬಲ್ಲ ಸಾಮರ್ಥ್ಯವಿರುವುದು ನಮಗೇ.

    ಜ್ಯಾಕ್ ಮಾ, ಚೀನಾದ ಈ ಉದ್ಯಮಿ ತನ್ನ ಅಲಿಬಾಬಾ ಜಾಲದ ಮೂಲಕ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದ್ದಾರೆ. ಕಡುಕಷ್ಟದಿಂದ ಮೇಲೆ ಬಂದ ಈ ತರುಣ ಆರಂಭದಲ್ಲಿ ಕೆಲಸ ಅರಸಿಕೊಂಡು ಹೋದಲ್ಲೆಲ್ಲ ತಿರಸ್ಕರಿಸಲ್ಪಟ್ಟವನೇ. ಅಂತರ್ಜಾಲವು ಜಗತ್ತನ್ನು ಆವರಿಸಿಕೊಳ್ಳಲು ಶುರುಮಾಡಿದಾಗ ಜ್ಯಾಕ್ ಮಾ ತಾವೇ ಸ್ವಂತ ಕಂಪನಿಯೊಂದನ್ನು ಆರಂಭಿಸಿದರು. ಮುಂದೆ ಕಮ್ಯುನಿಸ್ಟ್ ಸರ್ಕಾರ ಜಾಗತಿಕವಾಗಿ ಬೆಳೆಯುವ ಹಂಬಲ ತೋರಿದಾಗ ಜ್ಯಾಕ್ ಅದೃಷ್ಟ ಖುಲಾಯಿಸಿತು. ಮಾರುಕಟ್ಟೆಯಲ್ಲಿ ಇವರು ಅಮೇಜಾನ್​ಗೆ ಸಡ್ಡು ಹೊಡೆಯಬಲ್ಲ ಅಲಿಬಾಬಾ ಕಟ್ಟಿ ಜಗತ್ತಿಗೆ ಔದ್ಯಮಿಕ ಬೆಳವಣಿಗೆಯನ್ನು ತೋರಿಸಿಕೊಟ್ಟರು. ಬರುಬರುತ್ತ ಜ್ಯಾಕ್ ಮಾ ಚೀನಾದ ತರುಣರ ಪಾಲಿಗೆ ಹೀರೋ ಆಗಿಬಿಟ್ಟರು.

    ಇಷ್ಟನ್ನೂ ಈಗ ಹೇಳಲು ಕಾರಣವೇನು ಗೊತ್ತೇ? ಜ್ಯಾಕ್ ಮಾ ಖ್ಯಾತಿಯೇ ಚೀನಾಕ್ಕೆ ಈಗ ಸಹಿಸಲಸಾಧ್ಯವಾಗಿದೆ. ಸರ್ವಾಧಿಕಾರಿಯಾದವ ಮತ್ತೊಬ್ಬನ ಬೆಳವಣಿಗೆಯನ್ನು ಎಂದೂ ಸಹಿಸಲಾರ. ಆತ ಸದಾ ಅಸುರಕ್ಷತೆಯ, ಅನಿಶ್ಚಿತತೆಯ ಭೀತಿಯಲ್ಲಿ ನರಳುತ್ತಿರುತ್ತಾನೆ. ಚೀನಾದ ಅಧ್ಯಕ್ಷ ಷಿ ಜಿನ್​ಪಿಂಗ್​ರದ್ದು ಈಗ ಅದೇ ಪರಿಸ್ಥಿತಿ. ಒಂದೆಡೆ ವುಹಾನ್ ಕರೊನಾ ವೈರಸ್ ಷಿಯನ್ನು ಅಲುಗಾಡಿಸುತ್ತಿದ್ದರೆ, ಮತ್ತೊಂದೆಡೆ ಜ್ಯಾಕ್ ಮಾ ಬೆಳೆಯುತ್ತಿರುವ ರೀತಿ ಜಿನ್​ಪಿಂಗ್​ರಿಗೆ ಆತಂಕ ಉಂಟುಮಾಡಿದೆ. ಹೀಗಾಗಿಯೇ ಕಳೆದ ಕೆಲವಾರು ತಿಂಗಳಿಂದ ಷಿ ಜ್ಯಾಕ್ ಮಾ ಕಂಪನಿಗಳಿಗೆ ತೊಂದರೆ ಕೊಡಲು ಶುರುಮಾಡಿದ್ದಾರೆ. ಅಗಾಧವಾಗಿ ಬೆಳೆದು ನಿಂತಿದ್ದ ಜ್ಯಾಕ್​ಗೂ ಇದು ಸಹಿಸಲಾಗಲಿಲ್ಲ. ಅವರು ಅವಕಾಶ ಸಿಕ್ಕಾಗಲೆಲ್ಲ ಚೀನಾದ ಆರ್ಥಿಕ ನೀತಿಯ ಕುರಿತಂತೆ, ವೈರಸ್​ನ ಎದುರಿಸಿದ ರೀತಿಯ ಬಗ್ಗೆ ಟೀಕೆ ಮಾಡುತ್ತಲೇ ಬಂದರು. ಸರ್ಕಾರದ ವಿರುದ್ಧ ಒಂದೇ ಒಂದು ಮಾತನ್ನು ಸಹಿಸದ ಕಮ್ಯುನಿಸ್ಟರು ಜ್ಯಾಕ್​ರನ್ನು ಸಹಿಸಿಯಾರೇನು? ಸಹಜವಾಗಿಯೇ ತಿರುಗಿಬಿದ್ದರು. ಪರಿಣಾಮ ಆಫ್ರಿಕಾದ ಶ್ರೇಷ್ಠ ಉದ್ಯಮಿಗಳನ್ನು ಗುರುತಿಸುವ ಟಿ.ವಿ. ಸ್ಪರ್ಧೆಯ ತೀರ್ಪಗಾರರ ಪಟ್ಟಿಯಿಂದ ಜ್ಯಾಕ್ ಹೊರಬಿದ್ದಿದ್ದಾರೆ. ಇಡಿಯ ಕಾರ್ಯಕ್ರಮದ ಟೀಸರ್ ವಿಡಿಯೋದಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿದ್ದು ಜ್ಯಾಕ್. ಸ್ಪರ್ಧೆಯ ಆರಂಭದಿಂದ ಈ ಹಂತದವರೆಗೂ ಪ್ರತಿಯೊಬ್ಬ ಸ್ಪರ್ಧಿಯ ಸಾಮರ್ಥ್ಯದ ನಿರ್ಣಯ ಮಾಡಿದ್ದು ಜ್ಯಾಕ್. ಮತ್ತೀಗ ಅಂತಿಮ ಹಂತಕ್ಕೆ ಬಂದೊಡನೆ ಅವರನ್ನು ಈ ತೀರ್ಪಗಾರರ ಪಟ್ಟಿಯಿಂದ ಹೊರದಬ್ಬಿರುವುದು ಜಗತ್ತಿನ ಜನರ ಹುಬ್ಬೇರಿಸಿದೆ.

    ಇದನ್ನೂ ಓದಿ: 7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

    ಅಲಿಬಾಬಾ ಕಂಪನಿಯೇನೋ ‘ಔದ್ಯಮಿಕ ಒತ್ತಡಗಳ ಕಾರಣದಿಂದ ಜ್ಯಾಕ್​ಗೆ ಬರಲಾಗುತ್ತಿಲ್ಲ’ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇಷ್ಟೂ ದಿನಗಳ ಕಾಲ ಇದ್ದು ಅಂತಿಮ ಹಂತಕ್ಕೆ ಸಮಯ ಹೊಂದಾಣಿಕೆ ಆಗುತ್ತಿಲ್ಲ ಎಂಬುದನ್ನು ಯಾರೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಭಾರತದ ವಿದೇಶಾಂಗ ಖಾತೆಯ ಅಧಿಕಾರಿಯಾಗಿದ್ದ ಸೈಯ್ಯದ್ ಅಕ್ಬರುದ್ದೀನ್​ರಂತೂ ‘ಕೌನ್ ಬನೇಗಾ ಕರೋಡ್​ಪತಿಯಿಂದ ಅಮಿತಾಭ್ ಬಚ್ಚನ್​ರೇ ಕಾಣೆಯಾದಂತೆ ಇದು’ ಎಂದು ಕಟಕಿಯಾಡಿದ್ದಾರೆ. ಜ್ಯಾಕ್ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇದು ಭವಿಷ್ಯದ ಉತ್ಪಾತವೊಂದರ ಮುನ್ಸೂಚನೆ ಎಂದಂತೂ ಎಲ್ಲರಿಗೂ ಅನಿಸಿದೆ!

    ಮೇಲ್ನೋಟಕ್ಕೆ ಚೀನಾ ಬಲಾಢ್ಯವಾಗಿ ಕಾಣಿಸಿಕೊಳ್ಳುತ್ತಿದೆಯಾದರೂ ಒಳಗಿಂದೊಳಗೇ ಅದು ಸವಾಲುಗಳ ಸುನಾಮಿಯ ನಡುವೆ ಹೊಯ್ದಾಡುತ್ತಿದೆ. ಆರ್ಥಿಕವಾಗಿ ಬಲಾಢ್ಯವಾಗಿದ್ದೇನೆಂದು ತೋರಿಸಿಕೊಳ್ಳುವ ಅದರ ಪ್ರಯತ್ನವೆಲ್ಲವೂ ಜಗತ್ತಿನೆದುರು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಜಗತ್ತಿಗೆ ಚೀನಾ ಮೇಲಿದ್ದ ಅರೆ ಭರವಸೆಯನ್ನೂ ಕರೊನಾ ವೈರಸ್ ಪೂರ್ಣವಾಗಿ ಇಲ್ಲವಾಗಿಸಿದೆ. ಮೊದಲೆಲ್ಲ ಚೀನಾದ ಅಂಕಿ-ಅಂಶಗಳನ್ನು ಜಗತ್ತು ಸ್ವಲ್ಪಮಟ್ಟಿಗಾದರೂ ನಂಬುತ್ತಿತ್ತು. ಆದರೀಗ ಆ ನಂಬಿಕೆ ಉಳಿದಿಲ್ಲ. ಕರೊನಾ ಕುರಿತಂತೆ ಜಗತ್ತಿನ ಯಾವುದೇ ಪತ್ರಿಕೆಗಳು ಮುದ್ರಿಸುವ ಅಂಕಿ-ಅಂಶದಲ್ಲಿ ಚೀನಾದ ವಿಚಾರ ಇರುವುದೇ ಇಲ್ಲ. ಅಲ್ಲಿ ಕಂಡು ಬರುತ್ತಿರುವ ಸೋಂಕಿತರ ಸಂಖ್ಯೆಯಾಗಲೀ, ಗುಣ ಹೊಂದಿರುವವರ ಸಂಖ್ಯೆಯ ಕುರಿತಂತೆಯಾಗಲೀ ಜಗತ್ತು ನಂಬಿಕೆಯನ್ನು ಕಳೆದುಕೊಂಡುಬಿಟ್ಟಿದೆ. ಹೀಗಾಗಿ ಭಾರತದ ಕುರಿತಂತೆ ಜಗತ್ತಿಗಿರುವ ಭರವಸೆಯ ಒಂದು ಪ್ರತಿಶತದಷ್ಟೂ ಚೀನಿಯರು ಉಳಿಸಿಕೊಂಡಿಲ್ಲ. ಚೀನಾದಿಂದ ಈ ವೈರಸ್ ಹಬ್ಬುತ್ತಿದೆ ಎಂದು ಆರಂಭದಲ್ಲೇ ಎಚ್ಚರಿಕೆ ಕೊಟ್ಟ ಡಾ.ವೆನ್​ಲಿಯಾಂಗ್ ನಿಗೂಢ ರೀತಿಯಲ್ಲಿ ಮೃತಪಟ್ಟ ಮೇಲಂತೂ ಕಮ್ಯುನಿಸ್ಟರ ರಾಕ್ಷಸೀ ವೃತ್ತಿ ಜಗತ್ತಿನ ನಿದ್ದೆಗೆಡಿಸಿಬಿಟ್ಟಿದೆ. ಹೀಗಾಗಿಯೇ ಹಂತ-ಹಂತವಾಗಿ ಚೀನಿಯರೊಂದಿಗೆ ಸಂಬಂಧ ಕಡಿದುಕೊಳ್ಳಬೇಕೆಂಬ ಪ್ರಯತ್ನ ಎಲ್ಲ ರಾಷ್ಟ್ರಗಳದ್ದು. ಅದರಲ್ಲೂ ಆಸ್ಟ್ರೇಲಿಯಾದೊಂದಿಗೆ ಚೀನಾ ತಗಾದೆ ತೆಗೆದು ಕರೊನಾ ಮೂಲದ ಕುರಿತಂತೆ ತನಿಖೆ ನಡೆಸಲು ಒತ್ತಾಯ ಪಡಿಸಿದರೆ ತಾನು ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟು ಅಪಹಾಸ್ಯಕ್ಕೊಳಗಾಯ್ತು. ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿಕೊಂಡಂತೆ ಇದು. ಬಹುಶಃ ಕರೊನಾ ಪೂರ್ವ ಕಾಲದಲ್ಲಾಗಿದ್ದರೆ ಆಸ್ಟ್ರೇಲಿಯಾ ಹೆದರುತ್ತಿತ್ತೇನೋ, ಈಗ ಹಾಗಿಲ್ಲ. ಆಸ್ಟ್ರೇಲಿಯಾದ ಪ್ರಧಾನಿ ಚೀನಾದೊಂದಿಗಿನ ಸಂಬಂಧವನ್ನು ಕಳಚಿಕೊಂಡು ಭಾರತದೊಂದಿಗಿನ ಬಾಂಧವ್ಯವನ್ನು ಬಲಗೊಳಿಸಿಕೊಂಡರು. ಕರಿಯ ನೌಕರರೊಂದಿಗಿನ ಚೀನಾದ ವ್ಯವಹಾರ ಕೆಟ್ಟದ್ದಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಆಫ್ರಿಕಾ ಕೂಡ ತಿರುಗಿಬಿತ್ತು. ಸತತ ಸಾಲವನ್ನು ಕೊಟ್ಟು ಆಫ್ರಿಕಾದ ರಾಷ್ಟ್ರಗಳನ್ನು ಜೀತದಾಳುಗಳಂತೆ ನೋಡುವ ಚೀನಾಕ್ಕೆ ಇದು ಬಲುದೊಡ್ಡ ಹೊಡೆತವೇ. ಟ್ರಂಪ್ ಸೋತಿರುವುದು ಸ್ವಲ್ಪಮಟ್ಟಿಗೆ ಚೀನಾಕ್ಕೆ ಉಸಿರಾಡಲು ಅನುಕೂಲವೆಂಬಂತಿದೆ. ಇಲ್ಲವಾಗಿದ್ದರೆ ಅಮೆರಿಕ ನೇತೃತ್ವದಲ್ಲಿ ಜಗತ್ತೇನಾದರೂ ಚೀನಾದ ವಿರುದ್ಧ ತಿರುಗಿಬಿದ್ದಿತೆಂದರೆ ಚೀನಾ ಭಯಾನಕವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಅದಾಗಲೇ ಜಿ-7 ರಾಷ್ಟ್ರಗಳ ಪರವಾಗಿ ಅದಕ್ಕಾಗಿರುವ ನಷ್ಟವನ್ನು 4 ಟ್ರಿಲಿಯನ್ ಡಾಲರ್​ಗಳಿಗಿಂತಲೂ ಅಧಿಕವೆಂದು ಅಂದಾಜಿಸಲಾಗಿದೆ. ಇಡಿಯ ಜಗತ್ತು ಬಲುದೊಡ್ಡ ಮೊತ್ತದ ನಷ್ಟವನ್ನೂ ಜೀವಹಾನಿಯನ್ನೂ ಅನುಭವಿಸಿರುವುದು ಚರ್ಚೆಗೆ ಬರುತ್ತಲೇ ಇದೆ. ಇದಕ್ಕೇನಾದರೂ ಪರಿಹಾರ ನೀಡಲೇಬೇಕು ಎಂಬಂತಾದರೆ ಚೀನಾ ದಿವಾಳಿಯೇ ಆಗಿಬಿಡುತ್ತದೆ.

    ಭೋಪಾಲ್ ಅನಿಲ ದುರಂತಕ್ಕೆ ಯುನಿಯನ್ ಕಾರ್ಬೆಡ್ 470 ದಶಲಕ್ಷ ಡಾಲರ್​ಗಳನ್ನು, ಚೆನೋಬಿಲ್ ದುರಂತಕ್ಕೆ ಪ್ರತಿಯಾಗಿ ರಷ್ಯಾ ಒಂದೂಕಾಲು ಬಿಲಿಯನ್ ಡಾಲರ್ ಪರಿಹಾರ ಧನ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ಅಮೆರಿಕ ಅಣುಪರೀಕ್ಷೆ ನಡೆಸಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾದಾಗ ಪ್ರತಿಯೊಬ್ಬರಿಗೂ ಒಂದು ಲಕ್ಷ ಡಾಲರ್​ಗಳಷ್ಟು ಪರಿಹಾರ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈಗ ಜಗತ್ತಿನಾದ್ಯಂತ 10 ಕೋಟಿಯಷ್ಟು ಜನ ಈ ವೈರಸ್​ಗೆ ತುತ್ತಾಗಿದ್ದಾರೆ. 20 ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಉದ್ದಿಮೆಗಳ ನಷ್ಟ ಹೇಳತೀರದ್ದು. ಕೆಲಸ ಕಳೆದುಕೊಂಡವರ ಸಂಖ್ಯೆ ಅಂದಾಜಿಸಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಪ್ರತಿಯೊಂದು ರಾಷ್ಟ್ರವೂ ಪರಿಹಾರ ಕೇಳುತ್ತ ಕುಳಿತರೆ ಚೀನಾದ ಕಥೆ ಏನಾಗಬಹುದು? ಇದೆಲ್ಲ ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸಬೇಡಿ. ಅದಾಗಲೇ ಅಮೆರಿಕ, ಆಸ್ಟ್ರೇಲಿಯಾಗಳಲ್ಲದೇ ಭಾರತ, ಈಜಿಪ್ತ್ ನಂಥ ರಾಷ್ಟ್ರಗಳು ದಾವೆ ಹೂಡಿಯಾಗಿದೆ. ಹೀಗಾಗಿಯೇ ಚೀನಾ ವೈರಸ್​ನ ಹುಟ್ಟು ತನ್ನಲ್ಲಾಗಿದೆ ಎಂಬುದನ್ನು ಮರೆಮಾಚಲು ಹರಸಾಹಸ ಮಾಡುತ್ತಿದೆ. ಬೈಡೆನ್ ಚೀನಾದ ಪರವಾಗಿ ನಿಂತರಷ್ಟೇ ಬಚಾವಾಗಬಹುದು. ಇಲ್ಲವಾದರೆ ಬಲು ಕಷ್ಟವಿದೆ. ಇದರ ಜೊತೆ-ಜೊತೆಗೇ ಚೀನಾದ ಒಳಗೂ ಭಯಾನಕವಾದ ಆರ್ಥಿಕ ಸಂಕಷ್ಟ ಕಾಣುತ್ತಿದೆ. ಹಾಗೆ ನೋಡಿದರೆ ಎಲ್ಲ ರಾಷ್ಟ್ರಗಳಿಗಿಂತಲೂ ಮುಂಚಿತವಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದು ಚೀನಾ. ಇತರೆಲ್ಲ ರಾಷ್ಟ್ರಗಳು ಕರೊನಾಕ್ಕೆ ತುತ್ತಾಗುವ ವೇಳೆಗೆ ಅದು ಈ ಸಂಕಷ್ಟದಿಂದ ಹೊರಬಂದು ಆರ್ಥಿಕ ಪ್ರಗತಿಯನ್ನು ದಾಖಲಿಸಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಎಲ್ಲರಿಗೂ ಮುಂಚಿತವಾಗಿ ಕರೊನಾಕ್ಕೆ ಬಲಿಯಾದ ಚೀನಾ ಕಠಿಣವಾದ ಲಾಕ್​ಡೌನ್ ನಿಯಮಗಳನ್ನು ಜಾರಿಗೆ ತಂದು ವೈರಸ್ ಪ್ರಸರಣವನ್ನು ನಿಯಂತ್ರಿಸಿತು. ಜೊತೆಗೇ ಆರ್ಥಿಕ ಪ್ರಗತಿ ಕುಂಠಿತವಾಗದಂತೆ ನೋಡಿಕೊಳ್ಳಲು ಖಾಸಗಿ ವಲಯಕ್ಕೆ ಸಾಕಷ್ಟು ಹೂಡಿಕೆಯನ್ನೂ ಮಾಡಿತು. ಹೀಗಾಗಿ ಮೂರು ತಿಂಗಳಲ್ಲೇ ಆರ್ಥಿಕ ಪ್ರಗತಿ ಕಾಣಲಾರಂಭಿಸಿತು. ಉತ್ಪಾದನೆ ವೇಗವಾಗಿಯೇ ಹೆಚ್ಚಿತು. ಮತ್ತೊಂದೆಡೆ ಜಗತ್ತಿನ ಮುಂದುವರಿದ ರಾಷ್ಟ್ರಗಳು ಲಾಕ್​ಡೌನ್ ನಿಯಮಗಳನ್ನು ಕಠಿಣವಾಗಿ ಹೇರದೇ ಕರೊನಾ ಎದುರಿಸುವ ಭಿನ್ನ-ಭಿನ್ನ ಮಾರ್ಗಗಳ ಕುರಿತಂತೆ ಆಲೋಚಿಸಿದ್ದರಿಂದ ಚೀನಾದ ರಫ್ತು ಸಹಜವಾಗಿಯೇ ವೃದ್ಧಿಸಿತು. ಇದೇ ವೇಳೆ ಆಮದಿನಲ್ಲೂ ಹೆಚ್ಚಳ ಕಂಡುಬಂತು. ಆದರೆ ಕರೊನಾದ ಎರಡನೇ ಅಲೆ ಬರುತ್ತಿದೆ ಎಂದು ಗೊತ್ತಾದೊಡನೆ ಮುಂದುವರಿದ ರಾಷ್ಟ್ರಗಳ ಜನ ತಮ್ಮನ್ನು ತಾವು ಚೌಕಟ್ಟಿನೊಳಗೆ ತಂದುಕೊಳ್ಳುತ್ತಿರುವುದರಿಂದ ಚೀನಾದ ಆರ್ಥಿಕ ಪ್ರಗತಿಗೆ ಬಲುದೊಡ್ಡ ಸವಾಲು ಕಾಣುತ್ತಿದೆ. ಉತ್ಪಾದನೆಗೊಂಡ ವಸ್ತುಗಳು ಮಾರುಕಟ್ಟೆಗೆ ಬೇಡವೆಂದಾಗಿಬಿಟ್ಟರೆ ನಿಜಕ್ಕೂ ಸಂಕಟ ನಿಶ್ಚಿತ. ಈ ನಡುವೆಯೂ ಚೀನಾದ ಪ್ರಗತಿಯ ವೇಗ ಇಳಿಯದಂತೆ ನೋಡಿಕೊಂಡಿರೋದು ಅಲ್ಲಿನ ದಿನನಿತ್ಯದ ವಹಿವಾಟು. ಕರೊನಾ ತೀವ್ರವಾಗಿದ್ದ ಕಾಲಕ್ಕೆ ಶೇಕಡ ಅರ್ಧದಷ್ಟಿದ್ದ ಈ ಸ್ಥಳೀಯ ವಹಿವಾಟು ಕಳೆದ ಸಪ್ಟೆಂಬರ್ ವೇಳೆಗೆ ಶೇ. ಮೂರೂವರೆಯನ್ನು ದಾಟಿದೆ. ರಫ್ತು ನಿಂತುಹೋದರೂ ಸ್ಥಳೀಯ ಮಾರುಕಟ್ಟೆಯನ್ನು ಜೀವಂತವಾಗಿರಿಸಿ ಆರ್ಥಿಕತೆಯನ್ನು ಕಾಪಾಡಿಕೊಳ್ಳುವ ವಿಶ್ವಾಸ ಅದರದ್ದು.

    ಇದನ್ನೂ ಓದಿ: ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

    ಕಮ್ಯುನಿಸ್ಟ್ ಪಾರ್ಟಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದಾಗಲೇ ಷಿ ತನ್ನ ಪಡೆಯನ್ನು ಕರೆಸಿ ಚರ್ಚೆ ನಡೆಸಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಸಮಾರಂಭವೊಂದರಲ್ಲಿ ಷಿ ಮಾತನಾಡುತ್ತ ಕರೊನಾ ನಂತರ ಸಾಗಬೇಕಾಗಿರುವ ಹೊಸ ದಾರಿಯ ಕುರಿತಂತೆ ವಿಸ್ತಾರವಾಗಿ ರ್ಚಚಿಸಿದ್ದಾರೆ. ಜಗತ್ತು ಇನ್ನು ಮುಂದೆ ರಫ್ತು ಆಧಾರಿತ ಉದ್ಯಮದಿಂದ ಸಾಂಪ್ರದಾಯಿಕ ಶೈಲಿಯ 80ರ ದಶಕದ ಉದ್ಯಮ ಮಾದರಿಗೆ ಹೊರಳುವುದು ನಿಶ್ಚಿತ. ಇನ್ನುಮುಂದೆ ಯಾವ ರಾಷ್ಟ್ರವೂ ಮತ್ತೊಂದು ರಾಷ್ಟ್ರದ ಮರ್ಜಿಯಲ್ಲಿ ಇರುವುದಿಲ್ಲ. ತನ್ನ ರಾಷ್ಟ್ರದ ಸುರಕ್ಷತೆಯನ್ನು ಬಲಿಕೊಟ್ಟು ಮತ್ತೊಂದು ರಾಷ್ಟ್ರದ ಉದ್ಧಾರಕ್ಕೆ ತಾನು ತೇಯ್ದುಕೊಳ್ಳುವುದಿಲ್ಲ. ಭಾರತವಂತೂ ಅದಾಗಲೇ ಆತ್ಮನಿರ್ಭರತೆಯ ಮಾತುಗಳನ್ನಾಡಿ ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ಹಂತ-ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ. ರಾಖಿ ಹಬ್ಬದ ವೇಳೆಗೆ, ದೀಪಾವಳಿ ಸಂದರ್ಭದಲ್ಲಿ ಮತ್ತು ಹೊಸವರ್ಷದ ಹೊತ್ತಿನಲ್ಲೂ ಸ್ಥಳೀಯ ಉದ್ದಿಮೆಗಳು ರಾರಾಜಿಸಿದ್ದು ಇದಕ್ಕೆ ಉದಾಹರಣೆ. ಪರಿಸ್ಥಿತಿ ಹೀಗಿರುವಾಗ ಜಗತ್ತಿನಲ್ಲಾಗುತ್ತಿರುವ ಈ ಬದಲಾವಣೆಗೆ ಪೂರಕವಾಗಿ ತನ್ನನ್ನು ಸಿದ್ಧಪಡಿಸಿಕೊಳ್ಳಲು ಹೆಚ್ಚು-ಹೆಚ್ಚು ಸಂಶೋಧನೆಗಳಲ್ಲಿ ಹಣಹೂಡಿಕೆಗೆ ಚೀನಾ ನಿಶ್ಚಯಿಸಿದೆ. ಬದಲಾಗುವ ಜಗತ್ತಿನ ರೀತಿ-ನೀತಿಗಳಿಗೂ ತಾನು ಅನಿವಾರ್ಯವಾಗಲು ಬೇಕಾಗಿರುವ ಹೊಸ ಸಂಶೋಧನೆಗಳಿಗೆ ಚೀನಾ ತನ್ನ ಪೀಳಿಗೆಯನ್ನು ಸಜ್ಜು ಮಾಡುತ್ತಿದೆ. ಹೀಗಾಗಿ ತಕ್ಷಣಕ್ಕೆ ಮುಂದೇನಾಗಬಹುದು ಎಂದು ಹೇಳುವುದು ಕಷ್ಟವೇ. ಆದರೂ ಅಮೆರಿಕ ಇತ್ತೀಚೆಗೆ, ಚೀನಾ ಭಾರತದ ವಿರುದ್ಧ ತೋರುತ್ತಿರುವ ಆಕ್ರಮಕ ನೀತಿಯನ್ನು ಸರಿಪಡಿಸಿಕೊಳ್ಳಲೇಬೇಕು ಎಂದು ತಾಕೀತು ಮಾಡಿರುವುದನ್ನು ನೋಡಿದರೆ ಚೀನಾಕ್ಕೆ ಕೆಟ್ಟ ದಿನಗಳು ಆರಂಭವಾಗಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ!

    ಚೀನಾದ ನಷ್ಟ ಭಾರತಕ್ಕೆ ಲಾಭವಾಗಬೇಕು. ಜಗತ್ತನ್ನು ಆಕರ್ಷಿಸುವ, ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರವಾಗಿ ಭಾರತ ರೂಪುಗೊಳ್ಳಬೇಕು. ಜಗತ್ತಿನ ಜನರನ್ನು ನೆಮ್ಮದಿಯತ್ತ, ಶಾಂತಿಯತ್ತ ಕರೆದೊಯ್ಯಬಲ್ಲ ಸಾಮರ್ಥ್ಯವಿರುವುದು ನಮಗೇ. ಚೀನಾ ಯಾವ ಯಾವ ಕ್ಷೇತ್ರಗಳಲ್ಲಿ ತನ್ನ ಹೆಸರನ್ನು ಕೆಡಿಸಿಕೊಂಡಿದೆಯೋ, ಯಾವ ಯಾವ ರಾಷ್ಟ್ರಗಳೊಂದಿಗೆ ತನ್ನ ಸಂಬಂಧವನ್ನು ಹಳಸಿಕೊಂಡಿದೆಯೋ ಅಲ್ಲೆಲ್ಲ ಭಾರತ ಬಲಾಢ್ಯವಾಗಿದೆ. ಹೀಗಾಗಿ ಹೊಸ ಭಾರತಕ್ಕೆ ಇರುವ ಅವಕಾಶಗಳು ಹೆಚ್ಚು. ಅದಕ್ಕೆ ಆಪಲ್​ನ ಕರ್ನಾಟಕದ ಘಟಕದಲ್ಲಿ ಕಮ್ಯುನಿಸ್ಟ್ ಪ್ರೇರಿತ ಶಕ್ತಿಗಳು ದಾಂಧಲೆ ಮಾಡಿದಾಗಲೂ ಕಂಪನಿ ಭಾರತವನ್ನು ಬಿಟ್ಟುಹೋಗಲಿಲ್ಲ. ಬದಲಿಗೆ ಇನ್ನೂ ಹೆಚ್ಚು ಶಾಖೆಗಳನ್ನು ತೆರೆಯುವ ಅದಮ್ಯ ಇಚ್ಛೆ ವ್ಯಕ್ತಪಡಿಸಿತು.

    ನಿಜವಾದ ಸಮರ ಗಡಿಯ ಭಾಗದಲ್ಲಲ್ಲ, ಭಾರತದೊಳಗೆ. ಮತ್ತು ಅದು ಈಗ ಶುರುವಾಗಿದೆ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

    ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

    7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts