ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ವಿವಿಧ ವಿಭಾಗಗಳ ಟಾಪ್-10 ಸ್ಥಾನಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ 6 ವಿದ್ಯಾರ್ಥಿಗಳು ಒಟ್ಟು 13 ಸ್ಥಾನ ಪಡೆದಿದ್ದಾರೆ.
ಮಂಗಳೂರು ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವರುಣ್ ಗೌಡ ಎ.ಬಿ. ಕೃಷಿ ವಿಜ್ಞಾನ (ಬಿಎಸ್ಸಿ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪಶುವೈದ್ಯಕೀಯ -7, ಬಿಫಾರ್ಮಾ-8 ಮತ್ತು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ 5ನೇ ಸ್ಥಾನ ಪಡೆದಿರುವ ಇವರು ಬೆಂಗಳೂರು ನಿವಾಸಿ ಸರ್ವೇಯರ್ ಸೂಪರ್ವೈಸರ್ ಭೀಮಯ್ಯ- ಅನಿತಾ ದಂಪತಿ ಪುತ್ರ.
ಇನ್ನೊಂದು ಪ್ರಥಮ ಸ್ಥಾನ (ಬಿಎನ್ವೈಎಸ್) ಜಿಲ್ಲೆಗೆ ಬಂದಿರುವುದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಅರ್ನವ್ ಅಯ್ಯಪ್ಪ ಅವರಿಗೆ. ಮಡಿಕೇರಿ ನಿವಾಸಿಯಾಗಿರುವ ಅವರು ಬಿಎಸ್ಸಿ ಕೃಷಿ(4), ಬಿವಿಎಸ್ಸಿ(5), ಬಿಫಾರ್ಮಾ(7) ವಿಭಾಗಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ.
ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ, ಕಾಸರಗೋಡು ಜಿಲ್ಲೆಯ ಪೆರ್ಲದ ಬಾಲರಾಜ್ -ರಾಜನಂದಿನಿ ಕಜಂಪಾಡಿ ಅವರ ಪುತ್ರ ಗೌರೀಶ್ ಕಜಂಪಾಡಿ ಇಂಜಿನಿಯರಿಂಗ್ನಲ್ಲಿ 9ನೇ ಹಾಗೂ ಬಿಫಾರ್ಮಾದಲ್ಲಿ
10ನೇ ಸ್ಥಾನ ಪಡೆದಿದ್ದಾರೆ.
ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ಶಶಾಂಕ್ ಪಿ. ಇಂಜಿನಿಯರಿಂಗ್ ವಿಭಾಗದಲ್ಲಿ 4ನೇ ಹಾಗೂ ಎಚ್.ಗೌರೀಶ್ ಬಿಎಸ್ಸಿ(ಕೃಷಿ) ವಿಭಾಗದಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಮಂಗಳೂರು ಶಾರದಾ ಪಪೂ ಕಾಲೇಜಿನ ತೇಜಸ್ ಭಟ್ ಕೆ. ಪಶು ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ 10ನೇ ಸ್ಥಾನ ಪಡೆದಿದ್ದಾರೆ.
ಕಾಲೇಜಿನ ಬೋಧನಾ ಕ್ರಮ, ಅನುಕೂಲಕರ ಶೈಕ್ಷಣಿಕ ವೇಳಾಪಟ್ಟಿ, ಅಸೈನ್ಮೆಂಟ್ ಮತ್ತು ಹೆತ್ತವರ ನಿರಂತರ ಬೆಂಬಲ ಸಿಇಟಿಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ನೆರವಾಯಿತು. ಕಂಪ್ಯೂಟರ್ ಸೈನ್ಸ್ನಲ್ಲಿ ಓದು ಮುಂದುವರಿಸುವ ಉದ್ದೇಶವಿದೆ.
– ಶಶಾಂಕ್ ಪಿ, ಮಂಗಳೂರು ಎಕ್ಸ್ಪರ್ಟ್ ಕಾಲೇಜು
ಎಕ್ಸ್ಪರ್ಟ್ನಲ್ಲಿ ಕಲಿಕೆಗೆ ಉತ್ತಮ ವಾತಾವರಣ ಇದೆ. ಜತೆಗೆ ಕಠಿಣ ಪರಿಶ್ರಮ, ಹೆತ್ತವರ ಬೆಂಬಲದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಭವಿಷ್ಯದಲ್ಲಿ ವೈದ್ಯಕೀಯ ಓದುವುದು ಆದ್ಯತೆ. ಇತರ ಅವಕಾಶಗಳನ್ನೂ ಮುಕ್ತವಾಗಿದೆ.
– ಎಚ್.ಸಿ.ಗೌರೀಶ್, ಮಂಗಳೂರು ಎಕ್ಸ್ಪರ್ಟ್ ಕಾಲೇಜು
ರಾತ್ರಿ ನಿದ್ದೆ ಬಿಟ್ಟು ಓದುವ ಅಭ್ಯಾಸ ಇಟ್ಟುಕೊಂಡಿರಲಿಲ್ಲ. ಕಾಲೇಜಿನ ಯೋಜನಾಬದ್ಧ ಬೋಧನೆ ಮತ್ತು ಜೊತೆಗೆ ಹೊರಗೆ ಸ್ವಲ್ಪ ಕೋಚಿಂಗ್ನಿಂದ ಈ ಫಲಿತಾಂಶ ಸಾಧ್ಯವಾಗಿದೆ. ವೈದ್ಯಕೀಯ ಕ್ಷೇತ್ರ ಆದ್ಯತೆಯಾಗಿದ್ದು, ನೀಟ್ ಸಿದ್ಧತೆಯಲ್ಲಿದ್ದೇನೆ.
– ತೇಜಸ್ ಭಟ್ ಕೆ, ಮಂಗಳೂರು ಶಾರದಾ ಪಪೂ ಕಾಲೇಜು
ಮನೆಯಲ್ಲಿ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಉತ್ತಮ ಸಹಕಾರ ದೊರೆತಿದೆ. ಭೌತಶಾಸದಲ್ಲಿ ಉನ್ನತ ಅಧ್ಯಯನ ನಡೆಸಬೇಕೆಂದಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸದ್ಯ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ತಯಾರಿಯಲ್ಲಿದ್ದೇನೆ.
– ಗೌರೀಶ್ ಕಜಂಪಾಡಿ, ಪುತ್ತೂರು ವಿವೇಕಾನಂದ ಕಾಲೇಜು