ರಿಪ್ಪನ್ಪೇಟೆ: ಪ್ರಸ್ತುತ ದಿನಗಳಲ್ಲಿ ಜನರು ಜಂಕ್ಫುಡ್ಗಳ ಹಿಂದೆ ಬಿದ್ದು ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದು, ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಮಹತ್ವ ತಿಳಿಸುವ ಅಗತ್ಯವಿದೆ ಎಂದು ಡಾ. ಜ್ಯೋತಿ ರಾಥೋಡ್ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷ ಬಿಎಸ್ಸಿಯ ಗಂಧದ ಗುಡಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೋಡೂರಿನಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಮೌಲ್ಯವರ್ಧನೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಅಕ್ಕಿ ಹೊಟ್ಟೆ ತುಂಬಿಸುತ್ತದೆಯೇ ಹೊರತು ಪೋಷಕಾಂಶಗಳ ಅವಶ್ಯಕತೆಯನ್ನು ತುಂಬಿಸುವುದಿಲ್ಲ. ಸಿರಿಧಾನ್ಯಗಳು ಪ್ರೊಟೀನ್, ಲಿಪಿಡ್, ವಿಟಮಿನ್ ಬಿ, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ, ಜಿಂಕ್ ಮುಂತಾದ ಸಮತೋಲಿತ ಪೌಷ್ಟಿಕಾಂಶಗಳನ್ನು ಒಳಗೊಂಡಿವೆ. ಮಧುಮೇಹ, ಬೊಜ್ಜು ಮುಂತಾದ ರೋಗಗಳಿಗೆ ಸಿರಿಧಾನ್ಯಗಳು ರಾಮಬಾಣ ಎಂದರು.
ಮಕ್ಕಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ರಾಗಿ ಮಾಲ್ಟ್ ಕೊಡುವುದರಿಂದ ಕ್ಯಾಲ್ಸಿಯಂ ಜಾಸ್ತಿ ಪ್ರಮಾಣದಲ್ಲಿ ದೊರೆಯಲಿದೆ. ಇದರಿಂದ ಕಾಲು, ಸೊಂಟ, ಕತ್ತು ನೋವನ್ನು ದೂರ ಇಡಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಡಾ. ಶ್ರುತಿ ಮಾತನಾಡಿ, ಅಂಗಡಿಯಲ್ಲಿ ಮಾರಾಟ ಮಾಡುವ ಖಾದ್ಯಗಳಲ್ಲಿ ಸಂರಕ್ಷಕಗಳಿದ್ದು ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತವೆ. ಮನೆಯಲ್ಲಿಯೇ ಖಾದ್ಯ ತಯಾರಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಮೌಲ್ಯವರ್ಧಿತ ರಾಗಿ ಮಾಲ್ಟ್ ತಯಾರಿ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.