ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮಿತ್ತ ಹುಬ್ಬಳ್ಳಿಯಲ್ಲಿ ಶುಕ್ರವಾರ ಶ್ರೀ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ವೀರಶೈವ ಸಂಘಟನಾ ಸಮಿತಿ ಹಾಗೂ ಶ್ರೀ ವಿಶ್ವಗುರು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಸಂಘಟಿಸಿದ್ದ ಮೆರಣಿಗೆಗೆ ಮೂರುಸಾವಿರ ಮಠದ ಆವರಣದಿಂದ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಡೊಳ್ಳು, ಜಗ್ಗಲಿಗೆ, ಝಾಂಜ್ ತಂಡಗಳು ಮೆರವಣಿಗೆಗೆ ಮೆರಗು ತಂದವು. ಶ್ರೀ ಬಸವೇಶ್ವರ ಮಹಾರಾಜ್ ಕೀ ಜೈ…ಜೈ ಬಸವ…ಜೈ ಬಸವಣ್ಣ… ಇತ್ಯಾದಿ ಘೊಷಣೆಗಳು ಮೊಳಗಿದವು.
ಮೆರವಣಿಗೆಯು ಮೂರುಸಾವಿರ ಮಠದಿಂದ ಹೊರಟು ದಾಜೀಬಾನಪೇಟ, ಹೊಸ ಮೇದಾರ ಓಣಿ, ಬ್ರಾಡ ವೇ, ದುರ್ಗದಬೈಲ್, ಬೆಳಗಾವಿಗಲ್ಲಿ, ಮಹಾವೀರಗಲ್ಲಿ ಮಾರ್ಗವಾಗಿ ಸಾಗಿ ಶ್ರೀ ಮಠಕ್ಕೆ ಆಗಮಿಸಿತು.
ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕೆಎಲ್ಇ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಸದಾನಂದ ಡಂಗನವರ, ಡಾ. ಶರಣಪ್ಪ ಕೊಟಗಿ, ಪ್ರಭು ನವಲಗುಂದಮಠ, ನಾರಾಯಣ ಜರತಾರಘರ, ವೆಂಕಟೇಶ ಕಾಟವೆ, ಇತರರು ಇದ್ದರು.