ಹೈದರಾಬಾದ್: ತೆಲಂಗಾಣದ ಕರೀಮ್ನಗರ-ಸಿದ್ದಿಪೇಟ್ ರಸ್ತೆಯು ಕೆಲವೇ ಸೆಕೆಂಡುಗಳಲ್ಲಿ ಎರಡು ಭೀಕರ ರಸ್ತೆ ಅಪಘಾತಕ್ಕೆ ಶುಕ್ರವಾರ ಸಾಕ್ಷಿಯಾಗಿದೆ.
ಮಧ್ಯಾಹ್ನ 2ಗಂಟೆ ವೇಳೆ ಕರೀಮ್ನಗರದಿಂದ ಹೈದರಾಬಾದ್ಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟರೆ, ಕಾರು ಅಪಘಾತದ ಘಟನಾ ಸ್ಥಳಕ್ಕೆ ದಾರಿಹೋಕರು ಮತ್ತು ಇಬ್ಬರು ಪೊಲೀಸರು ಧಾವಿಸಿ, ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿರುವಾಗ ನೋಡನೋಡುತ್ತಿದ್ದಂತೆ ಬಂದ ಟ್ರಕ್ ಜನರ ಗುಂಪಿನತ್ತ ನುಗ್ಗಿತು. ಪರಿಣಾಮ ಇನ್ನಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಸಿದ್ದಿಪೇಟ್ ಇನ್ಸ್ಪೆಕ್ಟರ್ ಮತ್ತು ಓರ್ವ ಕಾನ್ಸ್ಟೇಬಲ್ ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ರಾಜೀವ್ ರಹದಾರಿ ಅಥವಾ ರಾಜೀವ್ ಹೈವೇಯಲ್ಲಿ ಶುಕ್ರವಾರ ಮಧ್ಯಾಹ್ನ 2.35ರ ಸುಮಾರಿಗೆ ಕೆಲವು ಕಾರುಗಳು ಮತ್ತು ದ್ವಿಚಕ್ರ ವಾಹನ ಸವಾರರು ನಿಧಾನವಾಗಿ ಮೊದಲನೇ ಅಪಘಾತದ ದೃಶ್ಯವನ್ನು ನೋಡುತ್ತಾ ಸಾಗುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಜನರ ಗುಂಪು ಸಹ ಇತ್ತು. ಇದೇ ವೇಳೆ ವೇಗವಾಗಿ ಬಂದ ಟ್ರಕ್ ಇನ್ನೋವಾ ಕಾರನ್ನು ಓವರ್ಟೇಕ್ ಮಾಡಿ ಜನರ ಗುಂಪಿನತ್ತ ಸೀದಾ ನುಗ್ಗಿ ಅನೇಕರನ್ನು ನೆಲಕ್ಕುರುಳಿಸಿತು.
ಇದನ್ನೂ ಓದಿ: ಹೊಸ ಮನೆ ಖರೀದಿಸಿ ಗೃಹಪ್ರವೇಶಿಸಿದ ಮೊದಲ ದಿನವೇ ಮಹಿಳೆಗೆ ಕಾದಿತ್ತು ಶಾಕ್..!
ಸುಮಾರು 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸಿದ್ದಿಪೇಟ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಸಿದ್ದಿಪೇಟ್ ಠಾಣೆಯ ಇನ್ಸ್ಪೆಕ್ಟರ್ ಪರಮೇಶ್ವರ್ ಗೌಡ ಮತ್ತು ಕಾನ್ಸ್ಟೇಬಲ್ ಸಹ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅಪಘಾತ ಸ್ಥಳಕ್ಕೆ ಸಿದ್ದಿಪೇಟ್ನ ಪೊಲೀಸ್ ಕಮಿಷನರ್ ಡಿ. ಜೋಯೆಲ್ ಡೇವಿಸ್ ಮತ್ತು ಅಸಿಸ್ಟೆಂಟ್ ಕಮಿಷನರ್ ರಾಮೇಶ್ವರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ಮೊದಲನೇ ಕಾರು ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟರೆ, ಟ್ರಕ್ ಅಪಘಾತದಲ್ಲಿ ಮತ್ತಿಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದ ಎರಡು ಅಪಘಾತಗಳಿಂದ ಒಟ್ಟು ಐದು ಮಂದಿ ಪ್ರಾಣಬಿಟ್ಟಿದ್ದಾರೆ. ಕಾರು ಅಪಘಾತದಲ್ಲಿ ಮೃತಪಟ್ಟ ಮೂವರು ಕರೀಮ್ನಗರ ನಿವಾಸಿಗಳಾಗಿದ್ದು, ಟ್ರಕ್ ಅಪಘಾತದಲ್ಲಿ ಜೀವ ಕಳೆದುಕೊಂಡವರು ಸಿದ್ದಿಪೇಟ್ ಮೂಲದವರು.
ಟ್ರಕ್ ಚಾಲಕ ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. (ಏಜೆನ್ಸೀಸ್)