ನವದೆಹಲಿ: ದೇಶದ ಗಮನ ಸೆಳೆದ ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಸಿಬಿಐ ನಡೆಸುವ ತನಿಖೆಯ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾವಹಿಸಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಕೇಸ್ಗೆ ಸಂಬಂಧಿಸಿ ಸಂತ್ರಸ್ತೆಯ ಕುಟುಂಬದವರಿಗೆ ಮತ್ತು ಸಾಕ್ಷಿಗಳಿಗೆ ಭದ್ರತೆ ಒದಗಿಸುವುದರಿಂದ ಹಿಡಿದು ತನಿಖೆಯ ಪ್ರತಿಹಂತವನ್ನೂ ಕೋರ್ಟ್ ಗಮನಿಸಲಿದೆ. ಕೇಸ್ ಅನ್ನು ಎಲ್ಲ ದೃಷ್ಟಿಕೋನದಲ್ಲೂ ಗಮನಿಸಿ ತನಿಖೆ ನಡೆಸುವುದಕ್ಕೆ ತನಿಖಾ ಸಂಸ್ಥೆಗೆ ಸೂಚಿಸಲಾಗಿದ್ದು, ಅದರ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.
ಕೆಲವು ಆ್ಯಕ್ಟಿವಿಸ್ಟ್ಗಳು ಮತ್ತು ವಕೀಲರು ಸಲ್ಲಿಸಿದ್ದ ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅದರ ವಿಚಾರಣೆ ಉತ್ತರ ಪ್ರದೇಶದಲ್ಲೇ ನಡೆಸಬೇಕೋ ಅಥವಾ ಹೊರಗೆ ನಡೆಸಬೇಕೋ ಎಂಬುದನ್ನು ತೀರ್ಮಾನಿಸಲಾಗುವುದು. ಪಿಐಎಲ್ನಲ್ಲಿ ಉಲ್ಲೇಖವಾಗಿರುವ ಸಂತ್ರಸ್ತೆಯ ಹೆಸರನ್ನು ಡಿಲೀಟ್ ಮಾಡುವುದಕ್ಕೆ ಉತ್ತರ ಪ್ರದೇಶ ಸರ್ಕಾರದ ಮನವಿಯನ್ನು ಕೋರ್ಟ್ ಪರಿಗಣಿಸಿರುವುದಾಗಿ ಹೇಳಿದೆ.
ಉತ್ತರ ಪ್ರದೇಶದಲ್ಲಿ ನ್ಯಾಯೋಚಿತ ವಿಚಾರಣೆ ಸಾಧ್ಯವಿಲ್ಲ ಮತ್ತು ಸಿಬಿಐ ತನಿಖೆಯ ಸ್ಥಿತಿಗತಿ ವರದಿಯನ್ನೂ ಅಲಹಾಬಾದ್ ಹೈಕೋರ್ಟ್ಗೆ ಸಲ್ಲಿಸುವ ಕಾರಣ ಪ್ರಕರಣದ ವಿಚಾರಣೆಯಲ್ಲಿ ವಿಶ್ವಾಸ ಮೂಡದೆಂದು ಪಿಐಎಲ್ಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲ್ಪಟ್ಟಿದ್ದವು.
ಇದನ್ನೂ ಓದಿ: ಲಕ್ಷ್ಮಿ ಬಾಂಬ್ ಚಲನಚಿತ್ರ ಬಿಡುಗಡೆಗೆ ತಡೆ: ಅಖಿಲಭಾರತ ಹಿಂದು ಮಹಾಸಭಾ ಆಗ್ರಹ
ಹಾಥರಸ್ನಲ್ಲಿ ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಮೇಲ್ವರ್ಗದ ನಾಲ್ವರು ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್ಜಂಗ್ ಹಾಸ್ಪಿಟಲ್ನಲ್ಲಿ ಮೃತಪಟ್ಟಿದ್ದಳು. ಸೆಪ್ಟೆಂಬರ್ 30ರ ರಾತ್ರಿ ಆಕೆಯ ಮನೆಯ ಸಮೀಪವೇ ಅಂತ್ಯಸಂಸ್ಕಾರ ನಡೆದಿತ್ತು. ತರಾತುರಿಯಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಪೊಲೀಸರು ಬಲವಂತ ಮಾಡಿದ್ದರು ಎಂಬ ಆರೋಪವೂ ವ್ಯಕ್ತವಾಗಿದೆ. (ಏಜೆನ್ಸೀಸ್)