ಬೆಂಗಳೂರು: ಬೆಂಗಳುರು ನಗರದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಬೆಳಗ್ಗೆಯೂ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಇಂದು ಬೆಳ್ಳಂ ಬೆಳಿಗ್ಗೆ ಬಿಎಂಟಿಸಿ ಬಸ್ನಲ್ಲಿ 61 ವರ್ಷ ಪ್ರಾಯದ ಕೆಪಿ ಅಬ್ದುಲ್ ಖಾದಿರ್ ಎನ್ನುವವರು ಹೃದಯಾಘಾತದಿಂದಾಗಿ ಸಾವಿಗೀಡಾಗಿದ್ದಾರೆ. ಇವರು ಕೇರಳದಿಂದ ಇಂದು ಬೆಳಗ್ಗೆ ಬೆಂಗಳೂರು ನಗರಕ್ಕೆ ಆಗಮಿಸಿದ್ದು ಯಶವಂತಪುರ ರೈಲ್ವೇ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆಗೆ ಬರುತ್ತಿದ್ದ ಬಿಎಂಟಿಸ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.
ಇವರು ಕೆಲಸ ಹುಡುಕುತ್ತಾ ಬೆಂಗಳೂರಿಗೆ ಬಂದವರು ಬಿಎಂಟಿಸಿ ಬಸ್ನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಬಿಎಂಟಿಸಿ ಬಸ್ನಲ್ಲಿ ಬರುವಾಗ ಮಂತ್ರಿಮಾಲ್ ಬಳಿ ಹಠಾತ್ ಹೃದಯಾಘಾತದಿಂದ ಖಾದಿರ್ ಸಾವಿಗೀಡಾಗಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆಯೆ ಕೇರಳ ಅಸೋಸಿಯೇಷನ್(KMCC) ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನ ಅಂಬ್ಯುಲೇನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಮೃತ ವ್ಯಕ್ತಿಯ ಕುಟುಂಬದವರು ಇಂದು ಸಂಜೆ ಆಗಮಿಸುವ ಸಾಧ್ಯತೆ ಇದ್ದು ನಂತರ ವ್ಯಕ್ತಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು. ಇದಾದ ಮೇಲೆ ಕುಟುಂಬದವರಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ.(ಏಜೆನ್ಸೀಸ್)