ಬೆಂಗಳೂರು: ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸದ್ಯಕ್ಕೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ರಾಮಚಂದ್ರ ಸಲಹೆ ನೀಡಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಲ್ಲಿ ರೋಗ ನಿರೋಧಕಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರಿಗೆ ಕರೊನಾ ವೈರಸ್ ಸೋಂಕು ಬಹು ಬೇಗ ತಗಲುವ ಸಾಧ್ಯತೆಗಳಿವೆ. ಕ್ಯಾನ್ಸರ್ ರೋಗಿಗಳು ಎಚ್ಚರಿಕೆಯಿಂದ ಇದ್ದರೆ ಮಾತ್ರ ಕರೊನಾದಿಂದ ದೂರವಿರಬಹುದು ಎಂದು ಹೇಳಿದ್ದಾರೆ.
ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಬರುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ಒಂದು ಕಡೆಯಿಂದ ಮತ್ತೊಂದೆಡೆ ಓಡಾಡುವುದರಿಂದ ಸೋಂಕಿತನಿಂದ ಅಥವಾ ಬೇರೆ ರೀತಿ ಕರೊನಾ ಸೋಂಕು ಹರಡುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಫಾಲೋಅಪ್ನಲ್ಲಿರುವ ರೋಗಿಗಳು ತುರ್ತು ಇದ್ದರೆ ಮಾತ್ರ ಆಸ್ಪತ್ರೆಗೆ ಬರಬೇಕು. ಸದ್ಯಕ್ಕೆ ಔಷಧ ಸೇವಿಸಿ ಮನೆಯಲ್ಲಿ ಇರುವುದು ಉತ್ತಮ. ರಕ್ತ ಕ್ಯಾನ್ಸರ್, ಲಿಂಫೋಮಾ ಮುಂತಾದ ಕ್ಯಾನ್ಸರ್ ಪೀಡಿತರು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸೆ 2 ವಾರ ತಡವಾದರೆ ಏನೊಂದು ಸಮಸ್ಯೆಯಾಗದು. ಎಲ್ಲೆಡೆ ಲಾಕ್ಡೌನ್ ಆಗಿರುವುದರಿಂದ ವಾಹನ ಸೌಲಭ್ಯದ ಕೊರತೆಯೂ ಇರುತ್ತದೆ. ಹಾಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಸ್ಥಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡಯುವುದು ಒಳಿತು ಎಂದು ಹೇಳಿದ್ದಾರೆ.
ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಸಾಕಷ್ಟು ಕಾಳಜಿವಹಿಸಲಾಗಿದೆ. ಪ್ರತಿನಿತ್ಯ ಸಾವಿರಾರು ರೋಗಿಗಳಿಗೆ ಸಂಸ್ಥೆಯಿಂದಲೇ ಉಚಿತವಾಗಿ ಊಟ ನೀಡಲಾಗುತ್ತಿದೆ ಹೇಳಿದ್ದಾರೆ.
ಊರ ದಾರಿ ಹಿಡಿದು ಹೊರಟವರಿಗೆ ಸಿಕ್ಕಿತು ಆಸರೆ: 6 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಊಟ, ವಸತಿ