More

    ಮಕ್ಕಳ ಬೆಳವಣಿಗೆಗೆ ಶಿಬಿರಗಳು ಪೂರಕ

    ಶಿವಮೊಗ್ಗ: ಮಕ್ಕಳಲ್ಲಿನ ಸುಪ್ತ ಪ್ರತಿಭೆ, ಬುದ್ಧಿ ಕೌಶಲ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಸಹಕಾರಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ್ ಅಭಿಪ್ರಾಯಪಟ್ಟರು.

    ನಗರದ ಬಿ.ಎಚ್.ರಸ್ತೆ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿರುವ ಏಳು ದಿನಗಳ ಬೇಸಿಗೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳನ್ನು ನಿಯಂತ್ರಣ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಮಕ್ಕಳ ಬೌದ್ಧಿಕ ಹಾಗೂ ಕ್ರಿಯಾಶೀಲ ಬೆಳವಣಿಗೆಗೆ ಶಿಬಿರಗಳು ಪೂರಕ ಎಂದರು.
    ಸಾಂಸ್ಕೃತಿಕ ಶಿಬಿರ, ಯೋಗ, ಕ್ರೀಡೆ ಕಲಿಕೆಯಂತಹ ಅಭ್ಯಾಸಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಶಿಬಿರಗಳಲ್ಲಿ ಮಕ್ಕಳಿಗೆ ಪ್ರಥಮ ಚಿಕಿತ್ಸೆ, ರಸ್ತೆ ಸುರಕ್ಷತೆ, ಗ್ರಾಮೀಣ ಕ್ರೀಡೆ, ಜನಪದ ನೃತ್ಯ ಸೇರಿದಂತೆ ವಿಶೇಷ ವಿಷಯಗಳನ್ನು ಕಲಿಸಲಾಗುತ್ತದೆ ಎಂದು ತಿಳಿಸಿದರು.
    ಶಿಬಿರದ ರೂವಾರಿ ರಾಜೇಶ್ ಅವಲಕ್ಕಿ ಮಾತನಾಡಿ, ರಾಜ್ಯ ಶಾಖೆ ಆದೇಶದ ಮೇರೆಗೆ ಬೇಸಿಗೆ ಶಿಬಿರಗಳನ್ನು ಆಯೋಜಿಸಿದ್ದು, ಮಕ್ಕಳಿಗೆ ಶಿಸ್ತುಬದ್ಧ ಜೀವನಶೈಲಿ ಹಾಗೂ ಪರಿಣಾಮಕಾರಿ ಅಂಶಗಳನ್ನು ಕಲಿಸಲಾಗುತ್ತದೆ ಎಂದು ಹೇಳಿದರು.
    ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಿಗೆ ಕೌಶಲ ಹಾಗೂ ತುರ್ತು ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ತಿಳಿದುಕೊಳ್ಳಲು ಅನುಕೂಲಕರ. ಶಿಬಿರ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಧ್ಯಾನ, ಯೋಗ, ಭಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಪರಿಪೂರ್ಣ ಕಲಿಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
    ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕರಾದ ಮೀನಾಕ್ಷಮ್ಮ, ಶಾಂತಮ್ಮ, ಸುನಂದಮ್ಮ, ಹೇಮಲತಾ, ದೀಪು, ಸ್ಕೌಟ್ಸ್ ಆಯುಕ್ತ ಕೆ.ಪಿ.ಬಿಂದುಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts