ರಾಂಚಿ: ಜಾರ್ಖಂಡ್ನ್ ಡಿಯೋಘಡ ಜಿಲ್ಲೆಯ ಬೈದ್ಯನಾಥ್ ದೇವಾಲಯಕ್ಕೆ ಅಳವಡಿಸಿರುವ ಕೇಬಲ್ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು,16 ಗಂಟೆಗಳಿಂದ ಸಿಲುಕಿಕೊಂಡಿರುವ 48 ಪ್ರವಾಸಿಗರನ್ನು ರಕ್ಷಿಸಲಾಗುತ್ತಿದೆ.
ಬೆಟ್ಟದ ಮೇಲಿರುವ ದೇವಾಲಯಕ್ಕೆ ತಲುಪಲು ಕೇಬಲ್ ಕಾರು ಅಳವಡಿಸಲಾಗಿದೆ. ಇವು ಪರಸ್ಪರ ಡಿಕ್ಕಿ ಹೊಡೆದಿರುವುದರಿಂದ ಉಳಿದ ಕೇಬಲ್ ಕಾರುಗಳು ಅಲ್ಲೇ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕೂಡ ಸ್ಥಳಕ್ಕೆ ಧಾವಿಸಿದ್ದು, ಜನರನ್ನು ಸುರಕ್ಷಿತವಾಗಿ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ. ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಡಿಯೋಘಡದ ಉಪ ಆಯುಕ್ತ ಮಂಜುನಾಥ್ ಭಜಂತ್ರಿ ತಿಳಿಸಿದ್ದಾರೆ.
ಕೆಲವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಒಟ್ಟು 48 ಕೇಬಲ್ ಕಾರ್ಗಳಿದ್ದು, ಅಲ್ಲೇ ಸಿಲುಕಿಕೊಂಡಿರುವ ಕಾರಣ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗುತ್ತಿದೆ.ಈ ಬಗ್ಗೆ ಗೊದ್ದಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮಾಹಿತಿ ನೀಡಿದ್ದಾರೆ.