ಬೆಂಗಳೂರು: ಪಾಕಿಸ್ತಾನವೊಂದು ಸತ್ತ ಕುದುರೆಯಂತೆ. ಅದನ್ನು ಜಮ್ಮು ಕಾಶ್ಮೀರದ ಪೊಲೀಸರು ಬೇಕಾದರೂ ಸೋಲಿಸುತ್ತಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಅಜಾದ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೆರೆಯ ದೇಶದ ಹೆಸರಿನಲ್ಲಿ ತಮ್ಮ ವಾಕ್ಚಾತುರ್ಯ ಮೆರೆಯುತ್ತಿದ್ದಾರೆ. ರಾಷ್ಟ್ರದ ಗಮನವನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ ಪಾಕಿಸ್ತಾನದ ಜತೆ ಭಾರತವನ್ನು ಹೋಲಿಸಿ ನಮಗೆ ಅಪಮಾನ ಮಾಡುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ, ಗೃಹ ಸಚಿವ, ಕೇಂದ್ರ ಸಚಿವರು ನಿರುದ್ಯೋಗದ ಬಗ್ಗೆ, ಜಿಡಿಪಿ, ಬೆಲೆ ನಿಯಂತ್ರಣದ ಬಗ್ಗೆ ಮಾತನಾಡುತ್ತಿಲ್ಲ. ಈ ಎಲ್ಲ ವಿಷಯಗಳು ಶ್ರೀಸಾಮಾನ್ಯನಿಗೆ ಅನ್ವಯವಾಗುವಂತವು. ಎಲ್ಲ ಜಾತಿ, ಧರ್ಮದವರಿಗೂ ಇವು ಅನ್ವಯವಾಗುತ್ತವೆ ಎಂದರು.
ಪಾಕಿಸ್ತಾನವು ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಪ್ರಧಾನಿ ಭಾರತೀಯರನ್ನು ಹೆದರಿಸುತ್ತಿದ್ದಾರೆ. ಇದು ನಮಗೆ ಅವಮಾನ ಮಾಡಿದಂತೆ. ಭಾರತಿಯರಾದ ನಾವು ಅಷ್ಟು ದುರ್ಬಲರೇ ಎಂದು ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವವರು ಕೇವಲ ಮುಸ್ಲಿಂರಲ್ಲ. ಅಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಈ ಬಗ್ಗೆ ಪಾರ್ಲಿಮೆಂಟ್ನಲ್ಲಿ ಬಹುಮತ ಸಾಬೀತು ಪಡಿಸಿದ್ದು ವಿವೇಚನಾರಹಿತ ಕಾರ್ಯ ಎಂದರು.
ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳಿಗೆ ಮುಗ್ಧ ಹುಡುಗರು ಎಂದ ಅಜಾದ್ ಅವರು ಇವರ ಸಾವಿನಿಂದಲೇ ಏನೋ ತಪ್ಪಾಗಿದೆ ಎಂದು ಎನಿಸುತ್ತದೆ ಎಂದು ಅರ್ಥವಾಗುವುದಿಲ್ಲವೆ ಎಂದು ಪ್ರಶ್ನಿಸಿದರು. (ಏಜೆನ್ಸೀಸ್)