ರಾಮದುರ್ಗ: ಕೃಷಿ ಪಂಪ್ಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ, ಅನಿಯಮಿತ ಲೋಡ್ಶೆಡ್ಡಿಂಗ್ಗೆ ಆಕ್ರೋಶಗೊಂಡ ಸುರೇಬಾನ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ನಡೆಸಿದರು.
ಮಂಗಳವಾರ ರಾತ್ರಿ 8 ಗಂಟೆಯಿಂದ ಬುಧವಾರ ಬೆಳಗಿನ ಜಾವ 3 ಗಂಟೆವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಧರಣಿ ನಡೆಸಿದರು. ಈ ಮೊದಲು ಪಂಪ್ಸೆಟ್ಗಳಿಗೆ 7 ಗಂಟೆ ತ್ರೀ ೇಸ್ ವಿದ್ಯುತ್ ಪೂರೈಸಲಾಗುತ್ತಿತ್ತು. ಈಚೆಗೆ ಕೇವಲ 5 ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಅದನ್ನೂ ಒಂದೇ ಸಮಯಕ್ಕೆ ಒದಗಿಸದೆ ಹಗಲು 3 ತಾಸು, ರಾತ್ರಿ 2 ತಾಸು ಪೂರೈಸಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸ್ವಲ್ಪ ನೀರಾವರಿ ಸೌಲಭ್ಯ ಹೊಂದಿದ ರೈತರು ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದು, ನೀರು ಹಾಯಿಸಬೇಕೆಂದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಬೆಳೆಗಳು ಒಣಗುತ್ತಿವೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬರುತ್ತಿದೆೆ ಎಂದು ರೈತರು ಅಳಲು ತೋಡಿಕೊಂಡರು.
ಟಿಸಿಗಳು ಸುಟ್ಟಾಗ ಬೇರೆ ಟಿಸಿ ಕೂಡ್ರಿಸಲು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೃಷಿ ಪಂಪ್ಸೆಟ್ಗಳಿಗೆ ನಿರಂತರವಾಗಿ 8 ಗಂಟೆ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ರಾಮದುರ್ಗ ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ ಹಾಗೂ ಅಭಿಯಂತ ಕಿರಣ ಸಣ್ಣಕ್ಕಿ ಸರ್ಕಾರದ ವಿದ್ಯುತ್ ಪೂರೈಕೆ ಆದೇಶದ ಪ್ರತಿ ಓದಿ ಹೇಳಿದರು. ಇದಕ್ಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರಿಸಿದರು. ಆಗ ಪಿಎಸ್ಐ ಸುನಿಲಕುಮಾರ ನಾಯಕ ಹಾಗೂ ಹೆಸ್ಕಾಂ ಅಧಿಕಾರಿಗಳು ಕೇವಲ ನಾಲ್ಕೈದು ದಿನ ಸರ್ಕಾರಿ ಆದೇಶ ಒಪ್ಪಿಕೊಳ್ಳಿ, ನಿಮ್ಮ ಮನವಿ ಸರ್ಕಾರಕ್ಕೆ ಸಲ್ಲಿಸಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದಾಗ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಮಲ್ಲನಗೌಡ ಪಾಟೀಲ, ಈರಬಸು ಕಡಗದ, ಶಿವಾನಂದ ಪಲ್ಲೇದ, ಮಲ್ಲಪ್ಪ ಮೇಟಿ, ಶರಣಪ್ಪ ಮೇಟಿ, ಶರಣಪ್ಪ ಬಾಡಗಾರ, ಒಳಬಸು ಹುಲ್ಲೂರ ಕಿತ್ತೂರು, ಹಂಪಿಹೊಳಿ, ಅವರಾದಿ, ಗೊಣ್ಣಾಗರ, ಚಿಕ್ಕತಡಸಿ, ಹಿರೇತಡಸಿ, ಮಾರಡಗಿ, ರೇವಡಿಕೊಪ್ಪ, ಜಾಲಿಕಟ್ಟಿ ಗ್ರಾಮಗಳ ರೈತರು ಇದ್ದರು.