More

    ಜುಲೈ 01ರ ಒಳಗಾಗಿ ‘ಬೆಂಗಳೂರು ವಾಟರ್‌ ಸಫೀಶಿಯೆಂಟ್‌’: BWSSB ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌

    ಬೆಂಗಳೂರು: ಜುಲೈ 1 ರ ಒಳಗಾಗಿ ಬೆಂಗಳೂರು ನಗರ ವಾಟರ್‌ ಸಫೀಶಿಯೆಂಟ್‌ ಆಗಲಿದ್ದು ಈ ನಿಟ್ಟಿನಲ್ಲಿ ಜಲಮಂಡಳಿಯ ವತಿಯಿಂದ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು BWSSB ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

    ಗುರುವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರು ಮರುಪೂರಣದ ಮೂರು ಪ್ರಮುಖ ಯೋಜನೆಯ ಅಡಿಯಲ್ಲಿ ನಾವು ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದಿದ್ಧಾರೆ.

    ನೀರಿನ ಉಳಿತಾಯಕ್ಕೆ ಒತ್ತು: ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ಮೂಲಕ ಲಭ್ಯವಾಗುತ್ತಿರುವ ಶುದ್ದ ನೀರಿನ ಸಮರ್ಪಕ ಬಳಕೆ ಹಾಗೂ ಅದರ ದುರ್ಬಳಕೆಯನ್ನು ತಪ್ಪಿಸಿ ಉಳಿತಾಯಕ್ಕೆ ಒತ್ತು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾವು ಸಾರ್ವಜನಿಕರಿಗೆ ಹಲವಾರು ಸೂಚನೆಗಳನ್ನು ನೀಡಿದ್ದೇವೆ. ಕುಡಿಯುವ ನೀರನ್ನ ಅನಗತ್ಯವಾಗಿ ಬಳಕೆ ಮಾಡದಂತೆ, ವಾಹನಗಳನ್ನು ತೊಳೆಯಲು ಬಳಸದಂತೆ ಹಾಗೂ ಏರಿಯೇಟರ್‌ ಮತ್ತು ಫ್ಲೋ ಕಂಟ್ರೋಲ್‌ ಬಳಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಯಲ್ಲೇ ಆದಷ್ಟು ಕಡಿಮೆ ನೀರನ್ನು ಬಳಕೆ ಮಾಡುವಂತೆ ಮನವಿಯನ್ನು ಮಾಡಲಾಗಿದೆ.

    ಸಂಸ್ಕರಿಸಿದ ನೀರಿನ ಬಳಕೆಗೆ ಆದ್ಯತೆ: ಅಂತರ್ಜಲ ಕುಸಿತದ ಕಾರಣ ಎದುರಾಗಿರುವ ಅಭಾವವನ್ನು ಸರಿದೂಗಿಸುವ ಹಿನ್ನಲೆಯಲ್ಲಿ ಈಗಾಗಲೇ ಬಲ್ಕ್‌ ಯೂಸರ್ಸ್‌ ಗಳಿಗೆ ಹಂತ ಹಂತವಾಗಿ ಶೇಕಡಾ 20 ರಷ್ಟು ನೀರನ್ನು ಕಡಿತಗೊಳಿಸುವ ಸೂಚನೆ ನೀಡಿದ್ದೇವೆ. ಇದೇ ವೇಳೆ ಅವರ ಸ್ವಚ್ಚತೆ ಹಾಗೂ ಇನ್ನಿತರೆ ಅವಶ್ಯಕತೆಗಳಿಗಾಗಿ ರಿಯಾಯಿತಿ ದರದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರನ್ನು ಒದಗಿಸುತ್ತಿದ್ದೇವೆ. ಸಂಸ್ಕರಿಸಿದ ನೀರಿನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗೂ ಅಗತ್ಯವಿರುವಷ್ಟು ಸಂಸ್ಕರಿಸಿದ ನೀರನ್ನು ನೀಡಲಾಗುತ್ತಿದೆ. 49 ಸಂಸ್ಥೆಗಳು ಸಂಸ್ಕರಿಸಿದ ನೀರನ್ನು ಈಗಾಗಲೇ ಬಳಸುತ್ತಿವೆ. 1300 ಎಂಎಲ್‌ಡಿ ಅಷ್ಟು ಸಂಸ್ಕರಿಸಿದ ನೀರು ನಮಗೆ ಲಭ್ಯವಿದ್ದು ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳೂ ತಮ್ಮ ದಿನನಿತ್ಯದ ಕುಡಿಯುವ ಅವಶ್ಯಕತೆಯನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಉಪಯೋಗಿಸುವಂತೆ ಸೂಚನೆಯನ್ನು ನೀಡಲಾಗಿದೆ.

    BWSSB President

    ಅಂತರ್ಜಲ ಹೆಚ್ಚಳಕ್ಕೆ ಸಂಸ್ಕರಿಸಿದ ನೀರು: ನಗರದ ಶೇಕಡಾ 40 ನೀರಿನ ಬೇಡಿಕೆಯನ್ನ ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದೇವೆ. 1300 ಎಂ.ಎಲ್.ಡಿ ನೀರನ್ನು ಬಳಸಿಕೊಂಡು ಈಗಾಗಲೇ 14 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಇನ್ನು ಹೆಚ್ಚಿನ ಕೆರೆಗಳನ್ನು ತುಂಬಿಸುವುದು ನಮ್ಮ ಆದ್ಯತೆಯಾಗಿದೆ. ಅದಲ್ಲದೇ, ನಮ್ಮ ವ್ಯಾಪ್ತಿಯಲ್ಲಿರುವ ಬತ್ತಿಹೋಗಿರುವ ಕೊಳವೆ ಬಾವಿಗಳನ್ನ ಬಳಸಿಕೊಂಡು ಅಂತರ್ಜಲ ಮತ್ತು ಮಳೆ ನೀರು ಮರುಪೂರಣಕ್ಕೆ ಆದ್ಯತೆಯನ್ನು ನೀಡಿದ್ದೇವೆ. ನಾವು ಉಪಯೋಗಿಸುತ್ತಿರುವಷ್ಟು ಅಂತರ್ಜಲವನ್ನು ಮರುಪೂರಣಗೊಳಿಸಬೇಕು. ಇದಕ್ಕಾಗಿ ಪ್ರತಿಯೊಂದು ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಸಂಧರ್ಭದಲ್ಲಿ ನಾವು 2 ಇಂಗುಗುಂಡಿಗಳನ್ನ ನಿರ್ಮಿಸುವುದನ್ನ ಕಡ್ಡಾಯಗೊಳಿಸಲಿದ್ದೇವೆ. ಇದನ್ನ ಸರಕಾರಿ ಸಂಸ್ಥೆಯಾದ ನಮ್ಮಿಂದಲೇ ಪ್ರಾರಂಭಿಸುತ್ತೇವೆ ಎಂದು ಹೇಳಿದ್ಧಾರೆ.

    ಜುಲೈ 1 2024 ರ ಒಳಗಾಗಿ ಬೆಂಗಳೂರನ್ನು ವಾಟರ್‌ ಸಫೀಶಿಯೆಂಟ್‌ ಮಾಡುವುದು ಹಾಗೂ ಜುಲೈ 2026 ರ ಒಳಗಾಗಿ ಬೆಂಗಳೂರನ್ನ ವಾಟರ್‌ ಸರ್‌ಪ್ಲಸ್‌ ಮಾಡುವುದು ನಮ್ಮ ಗುರಿಯಾಗಿದೆ. ಈ ಎಲ್ಲಾ ಪ್ರಮುಖ ಯೋಜನೆಗಳ ಆಧಾರದ ಮೇಲೆ ನಾವು ಬೃಹತ್‌ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ. ಈ ಅಭಿಯಾನದಲ್ಲಿ ನೀರಿನ ಉಳಿತಾಯ ಹಾಗೂ ಅದರಿಂದಾಗುವ ಗಳಿಕೆಯ ಬಗ್ಗೆಯೂ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

    ಮುಂದಿನ ವಾರದಿಂದ ನೀರಿನ ದುರ್ಬಳಕೆಯ ವಿರುದ್ದ ದಂಡ ವಿಧಿಸುವ ಅಭಿಯಾನ: ನೀರಿನ ದುರ್ಬಳಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕರಿಗೆ ಗೈಡ್‌ಲೈನ್ಸ್‌ ಕೊಡಲಾಗಿತ್ತು. ಆದರೂ ಕೆಲ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಇನ್ನೂ ನೀರಿನ ದುರ್ಬಳಕೆಯನ್ನು ಮುಂದುವರೆಸಿದ್ದಾರೆ ಎನ್ನುವ ದೂರುಗಳು ಮಂಡಳಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಹಾಗೂ ಜನರಿಗೆ ಇನ್ನಷ್ಟು ತಿಳುವಳಿಕೆಯನ್ನು ನೀಡುವ ಉದ್ದೇಶದಿಂದ ದಂಡ ವಿಧಿಸುವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

    ನಮ್ಮ ಈ ಎಲ್ಲಾ ಕ್ರಮಗಳು ಜಲಮಂಡಳಿಯನ್ನು ಶ್ರೀಮಂತಗೊಳಿಸುವುದಕ್ಕೆ ಅಲ್ಲ, ನಗರವನ್ನು ನೀರಿ ಲಭ್ಯತೆಯಲ್ಲಿ ಶ್ರೀಮಂತಗೊಳಿಸುವುದಾಗಿದೆ. ಸಾರ್ವಜನಿಕರು ಇಂತಹ ಸಂಕಷ್ಟ ಕಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಲಮಂಡಳಿಯ ಜೊತೆ ಕೈಜೋಡಿಸಬೇಕು ಎಂದು BWSSB ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಕರೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts