ಗ್ವಾಲಿಯರ್ : ಜನರಿಂದ ತುಂಬಿದ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದು ಮೂವರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಿಂದ ವರದಿಯಾಗಿದೆ. ದೆಹಲಿಯಿಂದ ಮಧ್ಯಪ್ರದೇಶದ ತಿಕಮ್ಗಡ್-ಛತರ್ಪುರ್ಗೆ ಹೋಗುತ್ತಿದ್ದ ಬಸ್ನಲ್ಲಿ ಬಹುತೇಕ ವಲಸೆ ಕಾರ್ಮಿಕರೇ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಸ್ಸಿನ ಒಳಗೆ ಜನರು ತುಂಬಿದ್ದರಲ್ಲದೆ, ಬಸ್ಸಿನ ಮೇಲೆ ಕೂತು ಕೂಡ ಹಲವರು ಪ್ರಯಾಣ ಮಾಡುತ್ತಿದ್ದರು. ದೆಹಲಿಯಿಂದ ತೀಕಮ್ಗಡಕ್ಕೆ ಬಸ್ ಕಂಡಕ್ಟರ್ ಒಬ್ಬ ಪ್ರಯಾಣಿಕರಿಗೆ 700 ರೂ. ನಂತೆ ಹೆಚ್ಚು ಹಣ ಪಡೆದಿದ್ದ ಎನ್ನಲಾಗಿದೆ. ಗ್ವಾಲಿಯರ್-ಝಾನ್ಸಿ ಹೆದ್ದಾರಿಯಲ್ಲಿರುವ ಜೌರಸಿ ಘಾಟ್ನಲ್ಲಿ ಟರ್ನ್ ತೆಗೆದುಕೊಳ್ಳುವಾಗ ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬಸ್ಸು ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಒಂದು ವಾರ ಲಾಕ್ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ
ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಲ್ಲದೆ ಎಂಟು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗ್ವಾಲಿಯರ್ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇತರ ಪ್ರಯಾಣಿಕರನ್ನು ಅನ್ಯ ಬಸ್ಗಳಲ್ಲಿ ಅವರ ಊರುಗಳಿಗೆ ಕಳುಹಿಸಲಾಗುತ್ತಿದೆ.
“ಚಾಲಕನೂ ಸೇರಿದಂತೆ ಬಸ್ನ ಎಲ್ಲ ಸಿಬ್ಬಂದಿ ನಿನ್ನೆ ರಾತ್ರಿ ರಾಜಸ್ಥಾನದ ಢೋಲ್ಪುರ್ನಲ್ಲಿ ಊಟ ಮಾಡಿದ ನಂತರ ಮದ್ಯ ಸೇವಿಸಿದ್ದರು. ಢೋಲ್ಪುರ್ನಲ್ಲೇ ಒಂದು ಟ್ರಕ್ಗೆ ಬಸ್ ಗುದ್ದಿತು. ಆಗ ಏನೂ ಸಮಸ್ಯೆಯಾಗಲಿಲ್ಲ. ಆದರೆ ಗ್ವಾಲಿಯರ್ ತಲುಪುವ ವೇಳೆಗೆ ಚಾಲಕನಿಗೆ ಹಿಡಿತ ತಪ್ಪಿ ವಾಹನ ಪಲ್ಟಿ ಹೊಡೆಯಿತು” ಎಂದು ದುರ್ಘಟನೆಗೊಳಗಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗಣಪತ್ಲಾಲ್ ಎಂಬುವರು ಹೇಳಿದ್ದಾರೆ.
ಕರೊನಾ ಸೋಂಕು ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ದೆಹಲಿಯಲ್ಲಿ ಲಾಕ್ಡೌನ್ ಜಾರಿಗೊಳಿಸಲಾಯಿತು. ಆತಂಕಕ್ಕೀಡಾಗಿರುವ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ದೆಹಲಿ ಬಸ್ ನಿಲ್ದಾಣಗಳಲ್ಲಿ ಜಮಾಯಿಸಿರುವ ದೃಶ್ಯಗಳು ಕಾಣಬರುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)
VIDEO | “ಎಲ್ಲಿಗೆ ಹೋಗುತ್ತಿದ್ದೀರಿ ?” ಕೇಳುತ್ತಿದ್ದಾರೆ ಗರ್ಭಿಣಿ ಪೊಲೀಸ್ ಅಧಿಕಾರಿ !