ಚಿಕ್ಕಮಗಳೂರು: ಲಕ್ಯಾ ಹೋಬಳಿಯ ದಾಸರಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತೋದಯ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೀನಾ ನಾಗರಾಜ್ಗೆ ಮನವಿ ಸಲ್ಲಿಸಿದರು.
1961- 62ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ದಾಸರಹಳ್ಳಿ ಅಣೆಕಟ್ಟು ನಿರ್ಮಾಣಕ್ಕೆ ಜಾಗ ಗುರುತಿಸಿದ್ದರು. ಇಂದಿಗೂ ಆ ಜಾಗವನ್ನು ಅಣೆಕಟ್ಟು ಮೀಸಲು ಪ್ರದೇಶ ಎಂದು ಕಾಯ್ದಿರಿಸಲಾಗಿದೆ. ಆದರೆ ಕೆಲ ಪ್ರಭಾವಿಗಳು ಅಣೆಕಟ್ಟು ನಿರ್ಮಾಣ ಮಾಡಲು ತಡೆಯೊಡ್ಡಿರುವುದರಿಂದ ಇಂದಿಗೂ ಅಣೆಕಟ್ಟು ನಿರ್ಮಾಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾಸರಹಳ್ಳಿ ಅಣೆಕಟ್ಟು ನಿರ್ಮಾಣ ಮಾಡಿದಲ್ಲಿ ಲಕ್ಯಾ, ಸಖರಾಯಪಟ್ಟಣ ಹೋಬಳಿ, ದೇವನೂರು, ನಿಡಘಟ್ಟ ಪ್ರಾಂತ್ಯಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಬಹುದು. ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳನ್ನು ಯಾವಾಗಲೂ ಬರಪೀಡಿತ ಪಟ್ಟಿಗೆ ಸೇರಿರುವುದಿಲ್ಲ. ಆದರೆ ಅತಿಹೆಚ್ಚು ಬರಪೀಡಿತ ಪ್ರದೇಶಗಳೇ ಇವುಗಳಾಗಿವೆ. ಹೀಗಾಗಿ ಕೂಡಲೇ ಅಣೆಕಟ್ಟು ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಒದಗಿಸಿಕೊಡುವಂತೆ ಒತ್ತಾಯಿಸಿದರು. ಪ್ರಮುಖರಾದ ರಾಜಣ್ಣ, ಚಂದ್ರಶೇಖರ, ಜಯಣ್ಣ ಮತ್ತಿತರರಿದ್ದರು.