ಮಸ್ಕಿ: ನಾರಾಯಣಪುರ ಬಲದಂಡೆ 5ಎ ಕಾಲುವೆ ಯೋಜನೆ ಜಾರಿಗಾಗಿ ಸರ್ಕಾರ ಬಜೆಟ್ನಲ್ಲಿ 500 ಕೋಟಿ. ರೂ.ಮೀಸಲಿಡುವಂತೆ ಒತ್ತಾಯಿಸಿ ಹೋರಾಟ ಸಮಿತಿಯ ಮುಖಂಡರು ನಗರದಲ್ಲಿ ಶನಿವಾರ ಬೈಕ್ ರ್ಯಾಲಿ ನಡೆಸಿದರು.
ಯೋಜನೆ ಜಾರಿಗೆ ಒತ್ತಾಯಿಸಿ ತಾಲೂಕಿನ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಧರಣಿ ಶನಿವಾರ 100 ದಿನ ಪೂರೈಸಿದ ಹಿನ್ನ್ನೆಲೆಯಲ್ಲಿ ಧರಣಿ ಸ್ಥಳದಿಂದ ಪಟ್ಟಣದ ಬಸವೇಶ್ವರ ನಗರದ ತಹಸಿಲ್ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದರು.
ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪುರ ಮಾತನಾಡಿ, 12 ವರ್ಷಗಳಿಂದ 5ಎ ಕಾಲುವೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ. ಕಳೆದ ಬಾರಿ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮಸ್ಕಿಗೆ ಆಗಮಿಸಿದ್ದ ಸಂದರ್ಭ ಅವರು, ನಮ್ಮ ಸರ್ಕಾರ ಬಂದರೆ 5ಎ ಕಾಲುವೆ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಯಡಿಯೂರಪ್ಪನವರು ಬಜೆಟ್ನಲ್ಲಿ 500 ಕೋಟಿ ಹಣ ಮೀಸಲಿಟ್ಟು ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪುರ ತಹಸೀಲ್ದಾರ್ ಬಲರಾಮ ಕಟ್ಟಿಮನಿಗೆ ಸಲ್ಲಿಸಿದರು.