ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ, ಭಗವಂತ ಆದಷ್ಟು ಬೇಗ ಕೃಪೆ ತೋರಿಸಿ ಬರವನ್ನು ದೂರಮಾಡಲಿ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಪ್ರಾರ್ಥಿಸಿದರು.
ಗರುಡಾಚಾರ್ಪಾಳ್ಯದ ಶ್ರೀ ಮಂಜುನಾಥಸ್ವಾಮಿ ದೇಗುಲದಲ್ಲಿ ಹಮ್ಮಿಕೊಂಡಿದ್ದ ಮೊದಲ ವರ್ಷದ ಬ್ರಹ್ಮರಥೋತ್ಸವದಲ್ಲಿ ಮಾತನಾಡಿದರು.
ಮಳೆ ಕೈಕೊಟ್ಟಿದ್ದರಿಂದ ಜನ-ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಈ ಬಾರಿ ಉತ್ತಮ ಮಳೆಯಾಗಿ ನಾಡು ಸಮೃದ್ಧವಾಗಲಿ ಎಂದು ನಾವೆಲ್ಲರೂ ಶಿವನಲ್ಲಿ ಮೊರೆಹೋಗೋಣ ಎಂದು ತಿಳಿಸಿದರು.
ಗರುಡಾಚಾರ್ಪಾಳ್ಯದ ಶ್ರೀ ಮಂಜುನಾಥ ದೇವಸ್ಥಾನ ಪುರಾತನದ್ದಾಗಿದ್ದು, ವರ್ಷದ ಹಿಂದೆ ನೂತನವಾಗಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಪ್ರಸಕ್ತ ವರ್ಷದಿಂದ ಶಿವರಾತ್ರಿ ಪ್ರಯುಕ್ತ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ನಾಲ್ಕು ದೇಗುಲಗಳನ್ನು ನಿರ್ಮಿಸಿದ್ದೇನೆ, ಹಾಗೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಕ್ತ ಕನಕದಾಸರ ಪುತ್ಥಳಿ ನಿರ್ಮಿಸಿ ಸಾಧ್ಯವಾದ ಸಮಾಜಸೇವೆ ಮಾಡಿದ್ದೇನೆ. ಇದಕ್ಕೆ ಭಗವಂತನ ಕೃಪೆ ಹಾಗೂ ಜನರ ಬೆಂಬಲ ಕಾರಣ ಎಂದರು.
ಕಲಾತಂಡಗಳೊಂದಿಗೆ ನೃತ್ಯ:
ಮಹಾ ಶಿವರಾತ್ರಿ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಪಂಚಾಮೃತ ಪೂರ್ವ ರುದ್ರಾಭಿಷೇಕ, ಮಹಾಮಂಗಳಾರತಿ, ರಥಪೂಜೆ ರಥಬಲಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ನಾದಸ್ವರ, ಗೊಂಬೆಕುಣಿತ, ಚಂಡೆವಾದ್ಯ, ತಮಟೆವಾದ್ಯ, ಭರತನಾಟ್ಯ ನೃತ್ಯರೂಪಕ ಆಯೋಜಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥೋತ್ಸವ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸ ಹೊತ್ತು ಮೆರವಣಿಯಲ್ಲಿ ಸಾಗಿದರು, ಭಕ್ತರು ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಇದೇ ವೇಳೆ ಜಾನಪದ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದ ಎಂಟಿಬಿ ನಾಗರಾಜ್ ನೃತ್ಯ ಮಾಡುವ ಮೂಲಕ ಜನರ ಗಮನ ಸೆಳೆದರು.
ಚುನಾವಣೆ ಗಿಮಿಕ್:
ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ಈ ಸರ್ಕಾರದಲ್ಲಿ ಹಣವಿಲ್ಲ. 600 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿ ಅಂತ ಹೊಸಕೋಟೆಯಲ್ಲಿ ಮಾಡಲು ಹೊರಟಿದ್ದಾರೆ. ಈ ಅನುದಾನ ಯಾವ ಬಿಡುಗಡೆಯಾಯಿತು, ಯಾವ ಇಲಾಖೆಯಿಂದ ವರ್ಕ್ ಆರ್ಡರ್ ಆಗಿದೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು. ಚುನಾವಣೆಗಾಗಿ ಗಿಮಿಕ್ ಮಾಡಲು ಸಿಎಂ ಹೊರಟಿದ್ದಾರೆ.ಹೊಸಕೋಟೆಗೆ ನಾನು ಸಚಿವನಾಗಿದ್ದಾಗ ಮೆಟ್ರೋ ರೈಲಿಗೆ 1400 ಕೋಟಿ ರೂ.ಕೊಡಿಸಿದ್ದೆ. ತಾಯಿ ಮಗು ಆಸ್ವತ್ರೆಗೆ ಅನುದಾನ ಕೊಡಿಸಿದ್ದೆ. ಏತ ನೀರಾವರಿ ಸೇರಿ ಹಲವು ಯೋಜನೆಗಳಿಗೆ ಹಣ ತಂದಿದ್ದೇನೆ. ಆದರೆ ಇದೀಗ ಇದನ್ನೆಲ್ಲ ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ದೂರಿದರು