ಹುಬ್ಬಳ್ಳಿ: ಕನ್ನಡ ಸಾಹಿತ್ಯ ಪರಿಷತ್ 2022ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹುಬ್ಬಳ್ಳಿಯ ಪತ್ರಕರ್ತ, ಲೇಖಕ ಕುಮಾರ ಬೇಂದ್ರೆ ಅವರ ’ಮಸಣದ ದಾರಿ’ ಕಥಾಸಂಕಲನ’ ಶ್ರೀಮತಿ ಬೋರಮ್ಮ ಗೋವಿಂದಪ್ಪ ದತ್ತಿ’ ಶ್ರೇಷ್ಠ ಕಥಾಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಕುಮಾರ ಬೇಂದ್ರೆ ವಿವಿಧ ಪ್ರಕಾರದ 13 ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಲಭಿಸಿದ ನಾಲ್ಕನೇ ದತ್ತಿ ಪ್ರಶಸ್ತಿ ಇದಾಗಿದೆ.
ಫೆಬ್ರವರಿ 18ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.