ಲಖನೌ: ಕರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಹೇರಿದ್ದ ಲಾಕ್ಡೌನ್ನಿಂದಾಗಿ ಖಾಸಗಿ ಸಂಸ್ಥೆಗಳಷ್ಟೇ ಅಲ್ಲದೆ, ಸರ್ಕಾರಗಳೂ ಕೂಡ ಆದಾಯವಿಲ್ಲದೆ ಕಂಗೆಟ್ಟಿದ್ದರೆ, ಈ ರಾಜ್ಯ ಮಾತ್ರ ಲಾಕ್ಡೌನ್ ಅವಧಿಯಲ್ಲೂ ಉತ್ತಮ ಆದಾಯ ಕಂಡಿದೆ. ಅದೇ ಖುಷಿಯಲ್ಲಿ ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ಬೋನಸ್ ಕೊಡಲೂ ಮುಂದಾಗಿದೆ.
ಸುದೀರ್ಘ ಲಾಕ್ಡೌನ್ನಿಂದಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಬೇರೆ ಯಾವ ರಾಜ್ಯವೂ ನಮ್ಮ ರಾಜ್ಯದಷ್ಟು ದಾಖಲೆಯ ಆದಾಯ ಕಂಡಿಲ್ಲ. ಆರ್ಥಿಕತೆ ಮತ್ತೆ ಹಳಿಗೆ ಬಂದಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಬೋನಸ್ ಕೂಡ ಘೋಷಿಸಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಅಂದಹಾಗೆ ಇಂಥದ್ದೊಂದು ಖುಷಿಯ ವಿಚಾರ ಹೊರಬಿದ್ದಿರುವುದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದಲ್ಲಿ. ಏಕೆಂದರೆ, ಲಾಕ್ಡೌನ್ ಅವಧಿಯಲ್ಲಿನ ಸತತ ಮೂರು ತ್ರೈಮಾಸಿಕದಲ್ಲೂ ಉತ್ತರ ಪ್ರದೇಶ ಉತ್ತಮ ಆದಾಯವನ್ನೇ ಕಂಡಿದೆ. ಅಕ್ಟೋಬರ್ನಲ್ಲಿ 10,672 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ಆದಾಯಕ್ಕಿಂತ ಶೇ. 20.6 ಹೆಚ್ಚು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಮೂಟೆಗಟ್ಟಲೆ ಗೊಬ್ಬರ ಸಹಿತ ಬಾವಿಗೆ ಬಿದ್ದ ಲಾರಿ!!!
ಆಗಸ್ಟ್, ಸೆಪ್ಟೆಂಬರ್ನಲ್ಲೂ ಒಳ್ಳೆಯ ಆದಾಯ ಬಂದಿದೆ. 2019ರ ಆಗಸ್ಟ್, ಸೆಪ್ಟೆಂಬರ್ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್, ಸೆಪ್ಟೆಂಬರ್ನಲ್ಲಿ ಕ್ರಮವಾಗಿ 600 ಹಾಗೂ 891 ಕೋಟಿ ರೂ. ಅಧಿಕ ಆದಾಯ ಬಂದಿದೆ ಎಂದು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ತಿಳಿಸಿದ್ದಾರೆ. ಅಲ್ಲದೆ ರಾಜ್ಯದ ಜಿಎಸ್ಟಿ ಹಾಗೂ ವ್ಯಾಟ್ ಸಂಗ್ರಹದಲ್ಲೂ ಈ ಸಲ ಏರಿಕೆ ಕಂಡುಬಂದಿದೆ. ಅಕ್ಟೋಬರ್ನಲ್ಲಿ 3,795 ಕೋಟಿ ರೂ. ಜಿಎಸ್ಟಿ ಹಾಗೂ 1,802 ಕೋಟಿ ರೂ. ವ್ಯಾಟ್ ಸಂಗ್ರಹವಾಗಿದೆ ಎಂದು ಖನ್ನಾ ತಿಳಿಸಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಅಬ್ಬಬ್ಬಾ.. ಒಂದೇ ಪ್ರಕರಣದ ಹಿಂದೆ ಒಂದೂವರೆ ಸಾವಿರ ಪೊಲೀಸರು!