ನವದೆಹಲಿ: ಬಾಲಿವುಡ್ನ ನಟ-ನಟಿಯರಿಗೂ ಭೂಗತ ಜಗತ್ತಿನ ಪಾತಕಿಗಳೊಂದಿಗೆ ಸಂಪರ್ಕ ಇರುವುದು ಹಲವು ಬಾರಿ ಸಾಬೀತಾಗಿದೆ. ಆದರೆ, ಈ ಬಾರಿ ಇದಕ್ಕಿಂತ ಹೊರತಾದ ಹಾಗೂ ಗುರುತರವಾದ ಆರೋಪ ಕೇಳಿಬಂದಿದೆ. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ವಕ್ತಾರ ಬೈಜಯಂತ್ ಜೈ ಪಾಂಡಾ ಅವರು ಬಾಲಿವುಡ್ನ ದಿಗ್ಗಜ ನಟ-ನಟಿಯರಿಗೂ ಪಾಕಿಸ್ತಾನದ ಸೇನೆಗೂ ನೇರ ನಂಟಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಒಡಿಶಾ ಮೂಲದ ಮಾಜಿ ಸಂಸತ್ ಸದಸ್ಯ ಬುಧವಾರ ಬೆಳಗ್ಗೆ ಟ್ವೀಟ್ ಮಾಡಿದ್ದು, ಬಾಲಿವುಡ್ನ ದಿಗ್ಗಜರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನಿಡುವ ನಿರ್ದಿಷ್ಟವಾದ ಪಾಕಿಸ್ತಾನಿಗಳು ಮತ್ತು ಎನ್ಆರ್ಐಗಳ ಜತೆ ನೇರ ವ್ಯವಹಾರಿಕಾ ಒಡನಾಟ ಇದೆ ಎಂದು ದೂರಿದ್ದಾರೆ.
ಬಾಲಿವುಡ್ ಮಂದಿ ಸಂಪರ್ಕ ಹೊಂದಿರುವ ಬಹುತೇಕ ಮಂದಿ ಪಾಕಿಸ್ತಾನ ಸೇನೆ, ಪಾಕ್ನ ಬೇಹುಗಾರಿಕಾ ಸಂಸ್ಥೆ ಐಎಸ್ಐನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಭಕ್ತರಂತೆ ಪೋಸ್ ಕೊಡುವ ಬಾಲಿವುಡ್ ಜನರು ಇಂಥ ಸಂಪರ್ಕಗಳನ್ನು ಕಡಿದುಕೊಳ್ಳುವ ದಿಟ್ಟತನ ತೋರಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ರಿಂದ ಕನ್ನಡಿಗರಲ್ಲಿ ವಿಶೇಷ ಮನವಿ
ಪ್ರಮುಖವಾಗಿ ಪಾಕ್ನಲ್ಲಿ ಅಡಗಿಕೊಂಡಿರುವ 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಸಂಚುಕೋರ ದಾವೂದ್ ಇಬ್ರಾಹಿಂನನ್ನು ಉದಾಹರಿಸಿರುವ ಅವರು, ಈತನನ್ನು ಬಳಸಿಕೊಂಡು ಐಎಸ್ಐ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿತು ಎಂಬುದು ಈಗಾಗಲೆ ಗೊತ್ತಿರುವ ಸಂಗತಿ. ಇಂಥ ವ್ಯಕ್ತಿಯ ಜತೆ ಬಾಲಿವುಡ್ ಮಂದಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಭಾವಚಿತ್ರಗಳು ಕೂಡ ಪ್ರಕಟವಾಗಿವೆ. ಯುಎಇಯಲ್ಲಿ ನಡೆಯುವ ಖಾಸಗಿ ಪಾರ್ಟಿಗಳಲ್ಲಿ ಈತನೊಂದಿಗೆ ಅವರೆಲ್ಲರೂ ಕುಣಿದುಕುಪ್ಪಳಿಸುತ್ತಾರೆ ಎಂದು ಹೇಳಿದ್ದಾರೆ.
ಟೋನಿ ಅಶೈ ಅಲಿಯಾಸ್ ಅಜೀಸ್ ಅಶೈ ಎಂಬಾತನ ಇನ್ನೊಂದು ಉದಾಹರಣೆ ಕೊಟ್ಟಿರುವ ಜೈ ಪಾಂಡಾ, ಈ ವ್ಯಕ್ತಿ ಟ್ವಿಟ್ಟರ್ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವಂತೆ ಮತ್ತು ಬಂದೂಕು ಸೇರಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಸ್ಥಳೀಯ ಯುವಕರನ್ನು ಪ್ರೇರೇಪಿಸುತ್ತಾನೆ. ಆದರೆ, ಈತ ತನ್ನ ಮಗ ಬಿಲಾಲ್ ಅಶೈನನ್ನು ಲಾಸ್ ಏಂಜೆಲಿಸ್ನಲ್ಲಿ ಇರಿಸಿ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸ್ನಾತಕೋತ್ತರ ಪದವೀಧರನನ್ನಾಗಿ ಮಾಡಿದ್ದಾನೆ ಎಂದು ವಿವರಿಸಿದ್ದಾರೆ.
ಅಷ್ಟೇ ಅಲ್ಲ, ಯುಎಇಯಲ್ಲಿ ನೆಲೆಸಿರುವ ಈತ ವಾಸ್ತುಶಿಲ್ಪಿಯಾಗಿದ್ದು, ಬಾಲಿವುಡ್ನ ದಿಗ್ಗಜ ನಟರ ಸಾಲಿನಲ್ಲಿ ನಿಲ್ಲುವ ಶಾರುಖ್ ಖಾನ್ ಅವರು ಯುಎಇನಲ್ಲಿ ಹೊಂದಿರುವ ಅನೇಕ ಕಟ್ಟಡಗಳನ್ನು ವಿನ್ಯಾಸ ಮಾಡಿ, ಕಟ್ಟಿಸಿಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಶಾರುಖ್ರ ಪತ್ನಿ ಗೌರಿ ಖಾನ್ ಅವರ ಹಲವು ಯೋಜನೆಗೊಳಲ್ಲಿ ಈತ ನೇರವಾಗಿ ಪಾಲ್ಗೊಳ್ಳುತ್ತಿದ್ದಾನೆ. ಒಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಈತ ಇನ್ನೊಂದೆಡೆ ಶಾಂತಿ ಧೂತನ ರೂಪಧರಿಸಿದ್ದಾನೆ. ಇಂಥ ಕಲಾಕಾರರನ್ನು ಗುರುತಿಸಿ ದೂರ ಇಡುವಲ್ಲಿ ನಮ್ಮ ಬಾಲಿವುಡ್ ಕಲಾಕಾರರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.