ನವದೆಹಲಿ: ಸಂಸತ್ತಿನಲ್ಲಿ ಗದ್ದಲದ ನಡುವೆ ಉಭಯ ಸದನಗಳನ್ನು ಸತತ ಎರಡು ದಿನವೂ ಮುಂದೂಡಲಾಗಿದೆ. ಲಂಡನ್ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸುವವರೆಗೂ ಸದನದಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಭಾಷಣದ ವೇಳೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದರೆ, ಇತ್ತ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಅದಾನಿ-ಹಿಂಡೆನ್ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದೆ. ಈ ವಿಚಾರವಾಗಿ ಸಂಸತ್ತಿನಲ್ಲಿ ಭಾರಿ ಗದ್ದಲ ಉಂಟಾದ್ದರಿಂದ ಎರಡೂ ಸದನಗಳನ್ನು ಇಂದು ಮತ್ತೆ ಮುಂದೂಡಲಾಯಿತು.
ಸಂಸತ್ತಿನ ಒಳಗೆ ಗೊಂದಲ ಉಂಟಾದಾಗ ಕಲಾಪಗಳ ಆಡಿಯೋವನ್ನು ಮ್ಯೂಟ್ ಮಾಡಲಾಯಿತು. ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕರ ಮೈಕ್ಗಳನ್ನು ಮ್ಯೂಟ್ ಮಾಡಲಾಗಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಪುನರಾವರ್ತಿಸಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಹಿಂದೆ ಮೈಕ್ ಆಫ್ ಆಗುತ್ತಿತ್ತು, ಆದರೆ, ಇಂದು ಸದನದ ಕಲಾಪಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಪಿಎಂ ಮೋದಿ ಅವರ ಸ್ನೇಹಿತನಿಗಾಗಿ ಸದನಗಳ ಕಲಾಪವನ್ನು ಮ್ಯೂಟ್ ಮಾಡಲಾಗಿದೆ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಲಂಡನ್ನಲ್ಲಿ ಮಾಡಿದ್ದ ಭಾಷಣ ಕಾರಣಕ್ಕಾಗಿ ರಾಹುಲ್ ಗಾಂಧಿಯವರು ಇಂದು ಲೋಕಸಭೆಯಲ್ಲಿ ಎರಡನೇ ಬಾರಿಗೆ ಆಕ್ರೋಶ ಎದುರಿಸಿದರು. ತಮ್ಮ ವಿರುದ್ಧದ ಆರೋಪಗಳಿಗೆ ಸದನದ ಒಳಗೆ ಉತ್ತರಿಸಲು ಬಯಸುವುದಾಗಿ ಗಾಂಧಿ ಹೇಳಿದ್ದಾರೆ. ಆದರೆ, ಮಾತನಾಡುವ ಮೊದಲು ಕ್ಷಮೆಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.
ರಾಹುಲ್ ಗಾಂಧಿಯವರ ಹೇಳಿಕೆಯನ್ನು “ಆಘಾತ ಮತ್ತು ತೀವ್ರ ಆಕ್ರಮಣಕಾರಿ” ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಸಂಸತ್ತಿನಲ್ಲಿ ಮಾತನಾಡುವ ಮೊದಲು ಗಾಂಧಿಯವರು ಹೊರಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸಂಸತ್ತಿನ ಬಗ್ಗೆ ರಾಹುಲ್ಗೆ ಗೌರವ ಇದ್ದರೆ ಕ್ಷಮೆಯಾಚಿಸಲಿ ಎಂದರು.
ಹಲವಾರು ಬಿಜೆಪಿ ಸಚಿವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ ಮತ್ತು ವಿದೇಶದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ “ಭಾರತ ವಿರೋಧಿ” ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಆರೋಪಿಸಿದರೆ. ರಾಹುಲ್ ಅವರ ಹೇಳಿಕೆಗಳನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸುವಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಏನಪ್ಪಾ ಮೋದಿ ನಿಂದು ಅಂಧಾ ದರ್ಬಾರ್! ಪ್ರಧಾನಿ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ
ರಾಹುಲ್ ಗಾಂಧಿ “ರಾಷ್ಟ್ರ ವಿರೋಧಿ ಟೂಲ್ಕಿಟ್”ನ ಶಾಶ್ವತ ಭಾಗವಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ದುರದೃಷ್ಟಕರ ಸಂಗತಿ. ರಾಷ್ಟ್ರದಿಂದ ಪದೇ ಪದೇ ತಿರಸ್ಕರಿಸಲ್ಪಟ್ಟ ನಂತರ, ರಾಹುಲ್ ಗಾಂಧಿ ಈಗ ಈ ರಾಷ್ಟ್ರವಿರೋಧಿ ಟೂಲ್ಕಿಟ್ನ ಶಾಶ್ವತ ಭಾಗವಾಗಿದ್ದಾರೆ. ಭಾರತದ ಆಂತರಿಕ ವಿಷಯಗಳಲ್ಲಿ ಇನ್ನೊಂದು ದೇಶದ ಮಧ್ಯಸ್ಥಿಕೆಯನ್ನು ಕೋರಿರುವ ಗಾಂಧಿಯವರ ಉದ್ದೇಶವೇನು ಎಂದು ಅವರು ಕೇಳಿದರು.
ಯುಕೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್, ಭಾರತೀಯ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಮತ್ತು ದೇಶದ ಸಂಸ್ಥೆಗಳ ಮೇಲೆ “ಪೂರ್ಣ ಪ್ರಮಾಣದ ಆಕ್ರಮಣ” ನಡೆಯುತ್ತಿದೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್)
ಪ್ರಧಾನಮಂತ್ರಿ ಆಫೀಸಿನ ಅಧಿಕಾರಿ ಎಂದು ಬಿಂಬಿಸಿ ಝೆಡ್ ಪ್ಲಸ್ ಸೆಕ್ಯುರಿಟಿ ಪಡೆದ ಭೂಪ ಅರೆಸ್ಟ್!
ಮಹಿಳೆಯ ಹೃದಯ ಕಿತ್ತು ಸಂಬಂಧಿಕರಿಗೆ ಉಣಬಡಿಸಿ ಅವರನ್ನೂ ಹತ್ಯೆಗೈದಿದ್ದ ರಾಕ್ಷಸನಿಗೆ ಜೀವಾವಧಿ ಶಿಕ್ಷೆ!
ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ 10ರೂ. ನೀಡಿದ 60 ವರ್ಷದ ಅಜ್ಜ!