ಪಟನಾ: ನಾಲ್ಕನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನಿತೀಶ್ ಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಬಿಹಾರ ರಾಜಕೀಯದಲ್ಲಿ ಈ ಬಾರಿ ಹೊಸ ಬದಲಾವಣೆಯಾಗಿದ್ದು, ಒಬ್ಬ ಉಪಮುಖ್ಯಮಂತ್ರಿ ಬದಲಾಗಿ ಇಬ್ಬರು ಡಿಸಿಎಂ ನಿತೀಶ್ ಕುಮಾರ್ ಸಂಪುಟದಲ್ಲಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಮೈತ್ರಿ ಪಕ್ಷ ಬಿಜೆಪಿಯ ಹಿರಿಯ ನಾಯಕರ ನಡುವೆ ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಬಿಹಾರದ ಉಪಮುಖ್ಯಂತ್ರಿಗಳಾಗಲಿದ್ದಾರೆಂದು ಹೇಳಲಾಗಿದೆ.
ಇದನ್ನೂ ಓದಿ: ಹರಿಯಾಣದ ಮೊದಲ ಮಹಿಳಾ ಸಂಸದೆ ಚಂದ್ರವತಿ ದೇವಿ ವಿಧಿವಶ
ನಿತೀಶ್ ಕುಮಾರ್, ಆರ್ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿದ್ದನ್ನು ಹೊರತುಪಡಿಸಿ 2005ರಿಂದಲೂ ಸುಶೀಲ್ ಕುಮಾರ್ ಮೋದಿ, ನಿತೀಶ್ ಕುಮಾರ್ ಸಂಪುಟದಲ್ಲಿ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಿತೀಶ್ ಕುಮಾರ್ ಮೈತ್ರಿಯನ್ನು ತೊರೆದು ಬಿಜೆಪಿಯೊಂದಿಗಿನ ಸಂಬಂಧವನ್ನು ಪುನರುತ್ಥಾನಗೊಳಿಸಿದಾಗ, ಸುಶೀಲ್ ಕುಮಾರ್ ಮೋದಿ ಮತ್ತೊಮ್ಮೆ ತಮ್ಮ ಎರಡನೆಯ ಸ್ಥಾನವನ್ನು ವಹಿಸಿಕೊಂಡಿದ್ದರು. ಆದರೆ, ಈ ಬಾರಿ ಎನ್ಡಿಎ ಮೈತ್ರಿಕೂಟದಲ್ಲಿ ಬದಲಾವಣೆಯೊಂದನ್ನು ಮಾಡಿಕೊಂಡಿದೆ.
ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ಸಂಜೆ 4.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಸತತ ನಾಲ್ಕನೇ ಅವಧಿಗೆ ಸಿಎಂ ಹುದ್ದೆ ಅಲಂಕರಿಸಲಿದ್ದಾರೆ ಮತ್ತು ಸಿಎಂ ಆಗಿ ಇದು ಅವರ ಆರನೇ ಪ್ರಮಾಣವಚನ ಆಗಲಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಹಿಡಿತಕ್ಕೆ ಬಿಜೆಪಿ ತುಡಿತ
ಕತಿಹಾರ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆದ್ದಿರುವ ಬಿಜೆಪಿಯ ತಾರಕಿಶೋರ್ ಪ್ರಸಾದ್ ಹಾಗೂ ನಾಲ್ಕನೇ ಬಾರಿಗೆ ಶಾಸಕಿಯಾಗಿರುವ ಬಿಹಾರ ಬಿಜೆಪಿ ಘಟಕದ ಉಪಾಧ್ಯಕ್ಷೆಯೂ ಆದ ಶಾಸಕಿ ರೇಣು ದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಹಿರಿಯ ನಾಯಕ, ಮೂರು ಅವಧಿಗೆ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿ ಅವರನ್ನು ಕೈಬಿಡಲಾಗಿದೆ. (ಏಜೆನ್ಸೀಸ್)