| ಮೃತ್ಯುಂಜಯ ಕಪಗಲ್ ಬೆಂಗಳೂರು
ಇತ್ತೀಚೆಗಿನ ಎಲ್ಲ ಚುನಾವಣೆಗಳಲ್ಲೂ ಮೇಲುಗೈ ಸಾಧಿಸಿರುವ ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದಕ್ಕೂ ಭರ್ಜರಿ ತಾಲೀಮು ಆರಂಭಿಸಿದೆ. ಸಭೆ-ಸಮಾರಂಭ, ಮೆರವಣಿಗೆ, ಭಾಷಣಕ್ಕಿಂತ ಸದ್ದಿಲ್ಲದ ಕಾರ್ಯಾಚರಣೆಗಳು ಪರಿಣಾಮಕಾರಿ ಹಾಗೂ ನಿರೀಕ್ಷಿತ ಫಲಿತಾಂಶವನ್ನು ನೀಡುತ್ತವೆ ಎಂಬುದನ್ನು ಮನಗಂಡಿರುವ ಕಮಲ ಪಡೆ ಇದೇ ತಂತ್ರಗಾರಿಕೆಯೊಂದಿಗೆ ಅಖಾಡಕ್ಕಿಳಿಯಲು ತೀರ್ಮಾನಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಣತಿಯಂತೆ ರಾಜ್ಯ ನಾಯಕರು ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.
ಅಂತಿಮ ಸ್ಪರ್ಶ: 36 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಸರಣಿ ಸಭೆ ಆಯೋಜಿಸಲು ಚಿಂತನೆ ನಡೆಸಿರುವ ರಾಜ್ಯ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅತ್ಯಾಸಕ್ತಿಯ ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆ ಬಳಸಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ. ಕುಟೀರ ಉದ್ಯೋಗ, ಕುಲ ಕಸುಬುಗಳು, ಪಾರಂಪರಿಕ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ, ಸ್ವಾವಲಂಬಿ ಗ್ರಾಮ ನಿರ್ವಣಕ್ಕೆ ಕೈಗೊಂಡ ಕ್ರಮಗಳನ್ನು ಮನವರಿಕೆ ಮಾಡಿಕೊಡಲಿದೆ. ಯಾತ್ರೆಯ ರೂಪು-ರೇಷೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಸಿಂಧನೂರಿನಲ್ಲಿ ನ.20ರಂದು ನಡೆಯಲಿರುವ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡು, ಅಧಿಕೃತ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕುಟುಂಬ ಸಮ್ಮಿಲನ ಕಾರ್ಯಕ್ರಮ
ರಾಜ್ಯದ 56,000 ಬೂತ್ಗಳ ಪೈಕಿ ಶೇ.90 ಬೂತ್ಗಳಲ್ಲಿ ಪಂಚರತ್ನ ಸಮಿತಿಗಳು ರಚನೆಯಾಗಿವೆ. ಬೂತ್ವುಟ್ಟದ ಅಧ್ಯಕ್ಷ, ತಲಾ ಒಬ್ಬ ಮಹಿಳೆ, ಬಿಎಲ್ಎ-2, ಎಸ್ಸಿ ಅಥವಾ ಎಸ್ಟಿ, ಇತರ ಹಿಂದುಳಿದ ವರ್ಗಕ್ಕೆ ಸೇರಿದವರೊಬ್ಬರು ಈ ಸಮಿತಿಗೆ ಸದಸ್ಯರಾಗಿದ್ದಾರೆ. ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಿರಂತರತೆ, ನಿಕಟ ಸಂಪರ್ಕ, ಮನೆ-ಮನೆಗೂ ಬೆಸುಗೆ, ಪಕ್ಷದ ಪರವಾಗಿ ಒಲವು ಮೂಡಿಸಿ ಬೆಳೆಸುವುದು ಪಂಚರತ್ನ ಕಾರ್ಯವಿಧಾನದ ಭಾಗವಾಗಿದೆ. ಮತ್ತೊಂದು ಹೆಜ್ಜೆಯಾಗಿ ಪ್ರತಿ ಗ್ರಾ.ಪಂ.ಮಟ್ಟದಲ್ಲಿ ‘ಕುಟುಂಬ ಸಮ್ಮಿಲನ’ ಕಾರ್ಯಕ್ರಮ ಸಂಘಟಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ, ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತದೆ. ಗ್ರಾ.ಪಂ. ಮಾಜಿ ಸದಸ್ಯರು, ತಾಲೂಕು-ಜಿಲ್ಲಾ ಪಂಚಾಯಿತಿ ಸದಸ್ಯರು, ಮುಖಂಡರು ಒಳಗೊಂಡು 200-250 ಕಾರ್ಯಕರ್ತರನ್ನು ಸೇರಿಸಿ ಸಭೆ ಮಾಡಲಾಗುತ್ತಿದ್ದು, ಮಂಗಳೂರು ವಿಭಾಗದಲ್ಲಿ ಸಫಲವಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ರಾ.ಪಂ. ಚುನಾವಣೆ ಟಿಕೆಟ್ ಆಕಾಂಕ್ಷಿಗಳು, ಮಾಜಿಗಳು, ಪ್ರಭಾವಿಗಳನ್ನು ಒಂದೆಡೆ ಸೇರಿಸಿ ಮುಖಾಮುಖಿ ಚರ್ಚೆಯ ಮೂಲಕ ಹೊಂದಾಣಿಕೆ ತಂದು, ಒಮ್ಮತದ ಅಭ್ಯರ್ಥಿ ಇಲ್ಲವೆ ಹಿಂದಿನ ಅವಧಿಯಲ್ಲಿ ಹೆಸರು ಕೆಡಿಸಿಕೊಂಡಿದ್ದರೆ ಸರಿದೂಗಿಸುವುದು (ಡ್ಯಾಮೇಜ್ ಕಂಟ್ರೋಲ್) ಕುಟುಂಬ ಸಮ್ಮಿಲನದ ತಿರುಳಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರ್ಯಕರ್ತರ ಚುನಾವಣೆಗೂ ಪಕ್ಷದ ವರಿಷ್ಠರು ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನದಂತೆ ಬಿರುಸಿನ ತಯಾರಿ ನಡೆದಿದೆ.
| ಮಹೇಶ್ ಟೆಂಗಿನಕಾಯಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ
ತಂತ್ರವೇನು?
- ತಳಮಟ್ಟದಲ್ಲಿ ಹಿಡಿತ ಸಾಧಿಸುವ ಮೂಲಕ ಮುಂದಿನ ವಿಧಾನಸಭೆ, ಸಾರ್ವತ್ರಿಕ ಚುನಾವಣೆಯನ್ನು ಸಲೀಸು ಮಾಡಿಕೊಳ್ಳುವುದು
- ಮುಖಂಡರು ಪಾಲ್ಗೊಳ್ಳುವ ಚುನಾವಣೆ ರೀತಿಯೇ ಕಾರ್ಯಕರ್ತರ ಚುನಾವಣೆಗೂ ಪ್ರಾಮುಖ್ಯತೆ ನೀಡಲಾಗುವುದೆಂಬ ಸಂದೇಶ ರವಾನಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬುವುದು