ಚಂಡಿಗಢ: ನೋಡಲು ತುಂಬಾ ಸುಂದರವಾಗಿದ್ದೀರಿ. ತುಂಬಾ ನಾಜೂಕಿನವರಾದ ನೀವು ಬಿಸಿಲಲ್ಲಿ ಮಾರ್ಕೆಟ್ಗೆಲ್ಲ ಬರಬಾರದು ಎಂದು ಹೇಳಿ ಟಿಕ್ಟಾಕ್ ಸ್ಟಾರ್ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೊಗಾಟ್ ಅವರನ್ನು ಛೇಡಿಸಿದ ಸರ್ಕಾರಿ ಅಧಿಕಾರಿಯೊಬ್ಬರು ಚಪ್ಪಲಿ ಏಟು ತಿಂದಿದ್ದಾರೆ.
ಸೊನಾಲಿ ಪೊಗಾಟ್ ಹಲ್ಲೆ ಮಾಡಿದವರು. ಹಿಸಾರ್ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಏಟು ತಿಂದವರು. ಸೊನಾಲಿ ಪೊಗಾಟ್ ಅವರನ್ನು ಸಂಪರ್ಕಿಸಿದ್ದ ಕೆಲವು ರೈತರು ಹಿಸಾರ್ನ ಬಲ್ಸಾಮಂದ್ ಮಂಡಿಯಲ್ಲಿ ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಖರೀದಿ ವಿಷಯಕ್ಕೆ ಸುಲ್ತಾನ್ ಸಿಂಗ್ ಅಡ್ಡಿಪಡಿಸುತ್ತಿರುವುದಾಗಿ ದೂರಿದ್ದರು.
ಈ ಹಿನ್ನೆಲೆಯಲ್ಲಿ ಸೊನಾಲಿ ಪೊಗಾಟ್ ಶುಕ್ರವಾರ ಮಂಡಿಯ ಪರಿಶೀಲನೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ಸುಲ್ತಾನ್ ಸಿಂಗ್ಗೆ ಮೊದಲೇ ಸೂಚಿಸಿದ್ದರು. ನಿಗದಿಯಂತೆ ಶನಿವಾರ ಮಧ್ಯಾಹ್ನದ ವೇಳೆಗೆ ಸೊನಾಲಿ ಪೊಗಾಟ್ ಬಲ್ಸಾಮಂದ್ ಮಂಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಸುಲ್ತಾನ್ ಸಿಂಗ್, ನಿಮ್ಮಂಥ ಚೆಂದುಳ್ಳಿ ಚೆಲುವೆಯರು, ನಾಜೂಕಿನವರು ಇಷ್ಟೊತ್ತಿನಲ್ಲಿ, ಹೀಗೆ ಮಂಡಿಗೆಲ್ಲ ಬರಬಾರದು ಎಂದು ಹೇಳಿದರು ಎನ್ನಲಾಗಿದೆ.
ಇದನ್ನೂ ಓದಿ: ವಿಹಾರಕ್ಕೆಂದು ಕುಟುಂಬವನ್ನು ಕರೆದೊಯ್ದ, ಆಮೇಲೆ ನಡೆದದ್ದು ಘನಘೋರ!
ಸ್ವಲ್ಪಹೊತ್ತು ಅಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದ ಸೊನಾಲಿ ಬನ್ಸಾಲ್, ನೆರಳಿನಲ್ಲಿ ಕುಳಿತಿದ್ದ ಸುಲ್ತಾನ್ ಸಿಂಗ್ ಬಳಿಗೆ ಹೋಗಿ ತಾವು ಹೆಣ್ಣು ಎಂಬ ಕಾರಣಕ್ಕೆ ಅಗೌರವವಾಗಿ ವರ್ತಿಸಿದ್ದನ್ನು ಪ್ರಶ್ನಿಸಿ ಚಪ್ಪಲಿಯಿಂದ ಹೊಡೆಯಲಾರಂಭಿಸಿದರು. ಸಿಟ್ಟು ತಣಿದ ನಂತರ ಅವರು ಅಲ್ಲಿಂದ ಹೊರಟು ಹೋದರು.
ಪರಸ್ಪರ ದೂರು: ಮಂಡಿಯಿಂದ ಹೊರಟ ಸೊನಾಲಿ ಪೊಗಾಟ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಮ್ಮನ್ನು ಅವಮಾನಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದರೆಂದು ಸುಲ್ತಾನ್ ಸಿಂಗ್ ವಿರುದ್ಧ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಸುಲ್ತಾನ್ ಸಿಂಗ್ ಕೂಡ ಠಾಣೆಗೆ ತೆರಳಿ, ಸರ್ಕಾರಿ ಅಧಿಕಾರಿಯಾದ ತಮ್ಮ ಮೇಲೆ ಸಾರ್ವಜನಿಕವಾಗಿ ವಿನಾಕಾರಣ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಗಿಯೂ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿಯೂ ಸೊನಾಲಿ ಪೊಗಾಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹರಿಯಾಣ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬರಾಲಾ, ಪೊಲೀಸ್ ತನಿಖೆ ಮುಗಿಯುವುದನ್ನೇ ಕಾಯುತ್ತಿದ್ದು, ನಂತರ ಸೊನಾಲಿ ಪೊಗಾಟ್ ಅವರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ನ ವಕ್ತಾರ ಹಾಗೂ ಶಾಸಕ ರಣದೀಪ್ ಸಿಂಗ್ ಸುರ್ಜೇವಾಲಾ, ಬಿಜೆಪಿ ನಾಯಕಿಯ ಈ ಕೃತ್ಯ ತುಂಬಾ ಹೀನವಾಗಿದೆ. ಪೊಗಾಟ್ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಮನೋಹರ್ಲಾಲ್ ಕಟ್ಟರ್ ಧೈರ್ಯ ತೋರುವರೇ ಎಂದು ಪ್ರಶ್ನಿಸಿದ್ದಾರೆ.
VIDEO| ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯರೂಪಕ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ