ಕಟ್ಟಪ್ಪನ: ಇಡುಕ್ಕಿ ಜಿಲ್ಲೆಯ ನೆಡುಂಗಾಡಂ ಎಂಬಲ್ಲಿನ ಮಸೀದಿಯೊಳಗೆ ಬಿಜೆಪಿಯ ಕೇರಳ ರಾಜ್ಯ ಕಾರ್ಯದರ್ಶಿ ಎ.ಕೆ.ನಜೀರ್ ಅವರ ಮೇಲೆ ಭಾನುವಾರ ಹಲ್ಲೆ ನಡೆದಿದೆ. ನಜೀರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಹಿಂದಿರುಗಿದ ಕೆಲವೇ ಗಂಟೆಗಳಲ್ಲಿ ಈ ಹಲ್ಲೆ ನಡೆದಿದೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ), ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ(ಡಿವೈಎಫ್ಐ) ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಿಲ್ಲ. ಘಟನೆ ಮಸೀದಿಯೊಳಗೆ ನಡೆದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ದಾಳಿ ನಡೆಸಿದವರ ವಿವರ ಬಹಿರಂಗವಾಗಿಲ್ಲ.
ಘಟನೆ ವಿವರ: ನಜೀರ್ ಅವರು ಪ್ರತಿಭಟನಾ ಜಾಥಾ ಮುಗಿಸಿ ತೂಕುಪಾಲಂ ಜುಮಾ ಮಸೀದಿಗೆ ನಮಾಜ್ ಮಾಡಲು ತೆರಳಿದ್ದರು. ಇದೇ ವೇಳೆ ಗುಂಪೊಂದು ಅವರನ್ನು ತಡೆದಿದೆ. ಆದಾಗ್ಯೂ ಮಸೀದಿಯ ಇಮಾಂ ಅವರು ನಜೀರ್ಗೆ ಪ್ರಾರ್ಥನೆ ಮಾಡಲು ಅವಕಾಶ ಒದಗಿಸಿದ್ದಾರೆ. ಹೀಗೆ ಪ್ರಾರ್ಥನೆ ಶುರುಮಾಡಿದ ವೇಳೆ ದಾಳಿ ನಡೆದಿದೆ. ಕುರ್ಚಿಯನ್ನು ಬಳಸಿ ನಜೀರ್ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ನೆಲದ ಮೇಲೆ ಉರುಳಿಸಿ ತುಳಿಯುವ ಕೆಲಸವನ್ನೂ ಹಲ್ಲೆಕೋರರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ನಜೀರ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಅಲ್ಲಿಂದ ಕೊಚ್ಚಿಯಲ್ಲಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ ಸ್ಥಳಾಂತರಿಸಲಾಗಿದೆ.
ಕಟ್ಟಪನ ಡಿಎಸ್ಪಿ ಎನ್ಸಿ ರಾಜಮೋಹನ್ ಹೇಳುವ ಪ್ರಕಾರ, ಬಿಜೆಪಿಯ ಜಾಗೃತಿ ಜಾಥಾದ ಸಂದರ್ಭದಲ್ಲಿ ಮೂವರು ಡಿವೈಎಫ್ಐ ಕಾರ್ಯಕರ್ತರು ಕೀಟಲೆ ಮಾಡಿದ್ದು, ಅದನ್ನು ತಡೆಯಲೆತ್ನಿಸಿದ್ದರು. ಆದರೆ, ಹಲ್ಲೆ ಮಸೀದಿ ಒಳಗೆ ನಡೆದಿರುವ ಕಾರಣ ಯಾರು ನಡೆಸಿದ್ದು ಎಂಬುದು ಸ್ಪಷ್ಟವಾಗಿಲ್ಲ.