More

    ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಸುಮಲತಾ; ಕೊಪ್ಪಳ ಮಾಜಿ ಸಂಸದ ಸೇರಿ ಹಲವರ ಸೇರ್ಪಡೆ

    ಬೆಂಗಳೂರು:
    ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಸಮ್ಮುಖದಲ್ಲಿ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡರು.
    ಬಿಜೆಪಿ ಬಾವುಟವನ್ನು ಹಿಡಿದು ಸುಮಲತಾ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸ್ವಾಗತಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸಂಸದೆ ಸುಮಲತಾ, ಕೊಪ್ಪಳದ ಮಾಜಿ ಸಂಸದ ಎಸ್.ಶಿವರಾಮೇಗೌಡ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.
    ಮೋದಿಜೀ ಅವರ ನಾಯಕತ್ವವನ್ನು ಇಡೀ ದೇಶವೇ ಮೆಚ್ಚುತ್ತಿದೆ. ದೇಶದಾದ್ಯಂತ ಮೋದಿಜೀ ಅವರ ಪರ ವಾತಾವರಣ ನಿರ್ಮಾಣವಾಗಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಎನ್‌ಡಿಎ ಪಡೆಯಬೇಕೆಂಬ ಸಂಕಲ್ಪ ಮೋದಿಯವರದು. ಅದು ಜನಸಾಮಾನ್ಯರ ಅಭಿಪ್ರಾಯ ಕೂಡ ಆಗಿದೆ ಎಂದರು.
    ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಮೋದಿ ಮತ್ತೊಮ್ಮೆ ಎಂಬ ವಾತಾವರಣವಿದೆ. ಮೋದಿ ಪರ ಅಲೆಯನ್ನು ಗಮನಿಸಿದ ಕಾಂಗ್ರೆಸ್ಸಿನ ಯಾವುದೇ ಸಚಿವರು ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಮುಂದಾಗಿಲ್ಲ ಎಂದು ತಿಳಿಸಿದರು.
    ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರಿದ್ದಾರೆ. ಅವರಿಗೆ ಹೃತ್ಪೂರ್ವಕ ಸ್ವಾಗತ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಅವರದೇ ಆದ ಪ್ರಭಾವ ಸುಮಲತಾ ಅವರಿಗೆ ಇದೆ ಎಂದು ಅಭಿಪ್ರಾಯಪಟ್ಟರು. ಇಡೀ ರಾಜ್ಯಕ್ಕೆ ಇದರಿಂದ ದೊಡ್ಡ ಶಕ್ತಿ ಲಭಿಸಿದಂತಾಗಿದೆ ಎಂದರು. ಕೊಪ್ಪಳದ ಮಾಜಿ ಸಂಸದ ಎಸ್.ಶಿವರಾಮೇಗೌಡ ಅವರಿಗೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪ್ರಭಾವ ಇದೆ ಎಂದರು. ಇತರ ಮುಖಂಡರನ್ನೂ ಅವರು ಸ್ವಾಗತಿಸಿದರು.
    ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಗೆಲುವಿನ ಸಂಕಲ್ಪ ನಮ್ಮದು. ಪಕ್ಷ ಸೇರ್ಪಡೆಯು ನಮ್ಮ ಬಲ ಹೆಚ್ಚಿಸಿದೆ. ಅವರ ಸೇವೆಯನ್ನು ಪಕ್ಷಕ್ಕೆ ಬಳಸಿಕೊಳ್ಳುತ್ತೇವೆ ಎಂದರು.

    ಇದೇ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಮೋದಿ ಅವರಿಂದ ನನಗೆ ಸ್ಫೂರ್ತಿ ಸಿಕ್ಕಿದೆ. ಅವರ ನಾಯಕತ್ವ, ಪರಿಕಲ್ಪನೆ, ಅವರ ಕನಸುಗಳು, ಸಂಕಲ್ಪವು ಹೊಸ ಸ್ಫೂರ್ತಿ, ತಿಳುವಳಿಕೆಗೆ ಕಾರಣವಾಗಿದೆ ಎಂದರು.
    ಬಿಜೆಪಿಯ ಹಿರಿಯರಿಂದ ಮಾರ್ಗದರ್ಶನ ಲಭಿಸಿದೆ. ಬಿಜೆಪಿ ಸೇರುವುದು ಉತ್ತಮ ಆಯ್ಕೆ ಅನಿಸಿದೆ. ಇಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸಹಕಾರವನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
    ಯಡಿಯೂರಪ್ಪ ಅವರ ಸಹಕಾರ ಮತ್ತು ಬಸವರಾಜ ಬೊಮ್ಮಾಯಿ ಅವರು ನೀಡಿದ ಸಹಕಾರದಿಂದ ಮಂಡ್ಯದ ಮೈಶುಗರ್ ಕಾರ್ಖಾನೆ ಪುನರಾರಂಭವಾಗಲು ಕಾರಣ. ಆದರೆ, ಈಗ ಅದರ ತೆಗೆದುಕೊಳ್ಳಲು ಪೈಪೋಟಿ ಶುರುವಾಗಿದೆ. ಮತ್ತೆ ಪುನರ್ ಉದ್ಘಾಟನೆ ಆಗಿದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡಬೇಕು ಎಂದು ಆಶಿಸಿದರು.
    ನುಡಿದಂತೆ ನಡೆಯುವ ನಾಯಕತ್ವ ಮೋದಿಜೀ ಅವರದು. 2047ರವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಲು ಸಹಕರಿಸಬೇಕಿದೆ. ನನಗೆ ನನ್ನ ಭವಿಷ್ಯಕ್ಕಿಂತ ನನ್ನ ದೇಶ, ಜಿಲ್ಲೆ, ರಾಜ್ಯ ಪ್ರಮುಖ. ಬಿಜೆಪಿ ಸೇರುವುದು ಅತ್ಯಂತ ಹೆಮ್ಮೆಮತ್ತು ಸಂತಸ ತಂದಿದೆ ಎಂದರು.
    ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್,ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಮಾಜಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಸಿ.ಟಿ.ರವಿ, ಮುನಿರತ್ನ, ನಾರಾಯಣಗೌಡ, ಶಾಸಕ ಜನಾರ್ದನ ರೆಡ್ಡಿ, ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್ ಕುಮಾರ್, ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್, ಪಕ್ಷದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.
    ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಎಲ್ಲ ಮುಖಂಡರಿಗೆ ಬಿಜೆಪಿಗೆ ಸ್ವಾಗತ ಕೋರಲಾಯಿತು.

    ಪಕ್ಷಕ್ಕೆ ಸೇರ್ಪಡೆಗೊಂಡವರು
    ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಕೊಪ್ಪಳದ ಮಾಜಿ ಸಂಸದ ಎಸ್.ಶಿವರಾಮೇಗೌಡ, ಸಚಿವ ಶಿವಾನಂದ ಪಾಟೀಲರ ಕುಟುಂಬದ ವಿಜಯಪುರ ಜಿಲ್ಲೆ ಯುವ ನಾಯಕ ಹರ್ಷ ಗೌಡ ಶಿವಶರಣ ಪಾಟೀಲ್, ಮಾಜಿ ಕ್ರಿಕೆಟ್ ಪಟು ದೊಡ್ಡಗಣೇಶ್, ಗಾಯತ್ರಿ ತಿಮ್ಮಾರೆಡ್ಡಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಶ್ರೀನಿವಾಸ್, ತುಕಾರಾಂಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಪ್ರಭುರಾಜ ಎಸ್ ಪಾಟೀಲ, ಗಂಗಾವತಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೀರಭದ್ರಗೌಡ ಮೊದಲಾದವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts