ಹರಪನಹಳ್ಳಿ: ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾರಳು ಎಚ್.ಎಂ.ಅಶೋಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿದ್ದ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಘೋಷಣೆ ಮಾಡಿದರು.
ಬಿಜೆಪಿಯಿಂದ ಎಚ್.ಎಂ.ಅಶೋಕ, ಕಾಂಗ್ರೆಸ್ನಿಂದ ಡಿ.ಅಬ್ದುಲ್ ರೆಹಮಾನ್ ಸಾಬ್ ನಾಮಪತ್ರ ಸಲ್ಲಿಸಿದ್ದರು. ಬೆಳಗ್ಗೆ 10.30ರಿಂದ ನಾಮಪತ್ರ ಸಲ್ಲಿಸಲು ಆರಂಭವಾಗಿದ್ದು ಮೊದಲಿಗೆ ಎಚ್.ಎಂ.ಅಶೋಕ ನಾಮಪತ್ರ ಸಲ್ಲಿಸಿ ತೆರಳಿದರು, ಬಳಿಕ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು. 12.30ಕ್ಕೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದರೂ ಯಾರು ನಾಮಪತ್ರ ಹಿಂಪಡೆಯಲಿಲ್ಲ. ನಂತರ ಚುನಾವಣೆ ಪ್ರಕ್ರಿಯೆ ನಡೆದಿದೆ. ಒಟ್ಟು 27 ಸದಸ್ಯರ ಪೈಕಿ 18 ಸದಸ್ಯರು ಹಾಜರಾಗಿದ್ದು, ಈ ಪೈಕಿ ಬಿಜೆಪಿ ಸಂಸದ ಹಾಗೂ ಶಾಸಕರು ಸೇರಿ ಒಟ್ಟು 11 ಜನರಿದ್ದು, ಕಾಂಗ್ರೆಸ್ನ ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 9 ಜನರಿದ್ದು, ಕಾಂಗ್ರೆಸ್ನ 8 ಜನ, ಬಿಜೆಪಿಯ ಒಬ್ಬರು ಗೈರು ಆಗಿದ್ದರು, ಹಾಜರಿದ್ದ 18 ಸದಸ್ಯರಲ್ಲಿ 11 ಮತ ಪಡೆಯುವ ಮೂಲಕ ಬಿಜೆಪಿ ಮತ್ತೆ 2ನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಯಿತು.
ಅಧ್ಯಕ್ಷರ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಪುರಸಭೆ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಅಧ್ಯಕ್ಷರನ್ನು ಹೊತ್ತು ಸಂಭ್ರಮಿಸಿ ನಂತರ ಪುರಸಭೆ ಕಚೇರಿಯಿಂದ ಬಿಜೆಪಿ ಕಚೇರಿಯವರೆಗೂ ಮೆರವಣಿಗೆ ನಡೆಸಲಾಯಿತು. ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ, ಚುನಾವಣಾ ಸಹಾಯಕ ಅಧಿಕಾರಿ ಅರವಿಂದ, ಡಿವೈಎಸ್ಪಿ ವಿ.ಎಸ್.ಹಾಲಮೂರ್ತಿ, ಸಿಪಿಐ ನಾಗರಾಜ ಕಮ್ಮಾರ, ಪಿಎಸ್ಐ ಪ್ರಕಾಶ ಸೇರಿದಂತೆ ಪೋಲಿಸ್ ಭದ್ರತೆಯಲ್ಲಿ ತೊಡಗಿದ್ದರು.