ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೈಕ್ ಉರುಳಿಬಿದ್ದು ಗಾಯಗೊಂಡಿದ್ದ ಯುವಕರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಸಿಪಿಐ ಆರ್.ಎಂ.ನದಾಫ್ ಮಾನವೀಯತೆ ಮೆರೆದಿದ್ದು, ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಜಾಲಹಳ್ಳಿಯ ಇಬ್ಬರು ಯುವಕರು ಬೈಕ್ನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯ ಬಾಂಡಗಲ್ಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದೇ ಮಾರ್ಗವಾಗಿ ಕರ್ತವ್ಯಕ್ಕೆ ತೆರಳಿದ್ದ ಸಿಪಿಐ ನದಾಫ್, 108 ತುರ್ತು ವಾಹನ ಸೇರಿ ಯಾವುದೇ ವಾಹನ ಬಾರದ ಕಾರಣ ತಕ್ಷಣವೇ ತಮ್ಮ ವಾಹನದಲ್ಲಿ ಇಬ್ಬರನ್ನು ಸಿಬ್ಬಂದಿ ಸಹಾಯದೊಂದಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಾರ್ಗ ಮಧ್ಯ ರಮೇಶ ಮೃತಪಟ್ಟರೆ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಇನ್ನೊಬ್ಬ ಯುವಕ ಶರಣಬಸವ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಮಾನವೀಯ ಕಾರ್ಯವನ್ನು ಕೆಲ ಯುವಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.