ನಾಗ್ಪುರ: ಮನುವಾದಿ ಸಿದ್ಧಾಂತವನ್ನು ಒಳಗೊಂಡಿರುವ ಸಂಘಪರಿವಾರಕ್ಕೆ ಈ ದೇಶದ ಜನರ ಬೆಂಬಲ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನೋಡಬೇಕಂದರೆ ನೀವು ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸವಾಲು ಹಾಕಿದ್ದಾರೆ.
ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಭೀಮ್ ಆರ್ಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್), ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್ಆರ್ಸಿ)ಗಳೆಲ್ಲವೂ ಆರ್ಎಸ್ಎಸ್ನ ಕಾರ್ಯಸೂಚಿಗಳು ಎಂದು ಹೇಳಿದರು.
ಆರ್ಎಸ್ಎಸ್ ಮುಖ್ಯಸ್ಥರಿಗೆ ನಾನೊಂದು ಸಲಹೆ ನೀಡುತ್ತೇನೆ. ನೀವು ಹಾಕಿಕೊಂಡಿರುವ ಸುಳ್ಳುಗಳ ಮುಸುಕನ್ನು ತೆಗೆದು ಆಖಾಡಕ್ಕೆ ಇಳಿಯಿರಿ. ಇದು ಪ್ರಜಾಪ್ರಭುತ್ವ. ನೀವು ನಿಮ್ಮದೇ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ನೇರವಾಗಿ ಚುನಾವಣೆಗೆ ಇಳಿಯಿರಿ. ಜನರೇ ಎಲ್ಲದಕ್ಕೂ ಉತ್ತರಿಸುತ್ತಾರೆ. ಮನುಸ್ಮೃತಿ ಬೇಕೋ, ಸಂವಿಧಾನ ಬೇಕೋ ಎಂದು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಚಂದ್ರಶೇಖರ್ ಆಜಾದ್ ಹೇಳಿದರು. ಹಾಗೇ ಮೀಸಲಾತಿ ಬಗ್ಗೆ ಚರ್ಚೆಗೆ ಬರುವಂತೆ ಆಹ್ವಾನಿಸಿದರು.
ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಈಗಾಗಲೇ ಎರಡು ಬಾರಿ ಪೊಲೀಸರು ಬಂಧಿಸಿದ್ದರು. ನಾಗ್ಪುರದಲ್ಲಿ ಭೀಮ್ ಆರ್ಮಿ ಕಾರ್ಯಕರ್ತರ ಸಭೆ ನಡೆಸಲು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತ್ತು.(ಏಜೆನ್ಸೀಸ್)