ಭರಮಸಾಗರ: ಕರೊನಾ ನಿಯಂತ್ರಣಕ್ಕಾಗಿ ವಾರದ ಸಂತೆ ರದ್ದುಮಾಡಲಾಗಿದೆ. ಆದರೂ ಸಹ ಮಂಗಳವಾರ ರಸ್ತೆಬದಿಯಲ್ಲಿಯೇ ಸಂತೆಯೋಪಾದಿಯಲ್ಲಿ ತರಕಾರಿ ವ್ಯಾಪಾರ ವಹಿವಾಟು ನಡೆಯಿತು.
ಇಲ್ಲಿನ ಮುಖ್ಯ ವೃತ್ತ, ಬಿಳಿಚೋಡು ಸಂಪರ್ಕ ಮುಖ್ಯರಸ್ತೆಯ ಎರಡೂ ಬದಿಯಲ್ಲಿಯೂ ತರಕಾರಿ, ಹಣ್ಣು ವ್ಯಾಪಾರ ಬೆಳಗ್ಗೆಯಿಂದಲೇ ನಡೆಯಿತು. ಜನರು ಗುಂಪು, ಗುಂಪಾಗಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂದಿತು.
ಲಾಕ್ಡೌನ್ ಸಡಿಲಿಕೆ ನಂತರ ವ್ಯಾಪಾರಸ್ಥರು ಹಾಗೂ ಹಳ್ಳಿಯಿಂದ ತರಕಾರಿ ತಂದ ರೈತರು ಯಾವುದೇ ಆತಂಕ ಇಲ್ಲದೆ ರಸ್ತೆಯ ಬದಿಯೇ ವ್ಯಾಪಾರ ವಹಿವಾಟು ನಡೆಸಿದರು. ಗ್ರಾಮಾಡಳಿತದಿಂದ ಯಾವುದೇ ನಿಯಂತ್ರಣ ಕೈಗೊಂಡಿರಲಿಲ್ಲ.
ತರಕಾರಿ ಬೆಲೆ ಇಳಿಕೆ: ಗ್ರಾಮೀಣ ಪ್ರದೇಶದಿಂದ ಮಾರಾಟಕ್ಕೆ ತಂದ ಟೊಮ್ಯಾಟೋ, ಮೆಣಸಿನಕಾಯಿ, ಎಲೆಕೋಸು, ಬೆಂಡೆಕಾಯಿ, ಬದನೆಕಾಯಿ ದರ ಕೆಜಿಗೆ 40 ರೂ. ಹಾಗೂ ವರ್ತಕರು ತಂದಿದ್ದ ಕ್ಯಾರೆಟ್, ಹಾಗಲಕಾಯಿ, ಈರುಳ್ಳಿ, ನುಗ್ಗೇಕಾಯಿ ದರ ಕೆಜಿಗೆ 50ರಿಂದ 60 ರೂ.ಗೆ ಮಾರಾಟ ಮಾಡುತ್ತಿದ್ದರು.