ಭರಮಸಾಗರ: ಭಕ್ತಿ ಇದ್ದವರಿಗೆ ಭಗವಂತನ ದರ್ಶನ ಸಾಧ್ಯ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಪವಮಾನ ಪ್ರತಿಷ್ಠಾನದಿಂದ ಆಸ್ಪತ್ರೆ ರಸ್ತೆಯ ವಾಣಿ ನಿವಾಸದ ಅಂಗಳದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಅನುಗ್ರಹ ಸಂದೇಶ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
ದೇವರಿಗಿಂತ ದೊಡ್ಡವನಾಗಬೇಕೆಂದು ಅಮೃತ ಪಡೆಯಲು ಹೋದ ರಾಹುವಿಗೆ ಅದು ವಿಷವಾಯಿತು. ಇದು ದೇವರನ್ನು ನಂಬಿದವರಿಗೆ ಬದುಕಿನ ಅರ್ಥ ಎಂದರು.
ಭಗವಂತನನ್ನು ನಂಬಿದರೆ ಅವನು ಎಂದಿಗೂ ಕೈ ಬಿಡಲಾರ. ಪ್ರಸ್ತುತ ಸಮಾಜಕ್ಕೆ ಪ್ರಾಮಾಣಿಕತೆ, ಧರ್ಮ ರಕ್ಷಣೆ, ತತ್ವಜ್ಞಾನದ ಅಗತ್ಯ ಇದೆ. ಇದಕ್ಕಾಗಿ ಪವಮಾನ ಪ್ರತಿಷ್ಠಾನದಂತಹ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದರು.
ಎಲ್ಲರಿಗೂ ಭಗವಂತ ಮಾರ್ಗದರ್ಶನ ಮಾಡುತ್ತಾನೆ. ಇದನ್ನು ಯಾರು ಅರ್ಥ ಮಾಡಿಕೊಂಡು ನಡೆಯುತ್ತಾರೋ ಅವರು ಉನ್ನತಿ ಕಾಣುತ್ತಾರೆ ಎಂದು ತಿಳಿಸಿದರು.
ಬಿ.ಜೆ.ರಾಮಚಂದ್ರರಾವ್ ಅವರನ್ನು ಶ್ರೀಪಾದರು ಗೌರವಿಸಿದರು. ವಿಪ್ರ ಸಮಾಜದ ಬಿ.ಮಲ್ಲಾರಿ ರಾವ್, ಬಿ.ದತ್ತಾತ್ರಿ, ಎಸ್.ನಂಜುಡರಾವ್, ಸಿ.ಶೇಷಗಿರಿ, ಬಿ.ಜೆ.ರಾಮಚಂದ್ರ, ಪ್ರತಿಷ್ಠಾನದ ಸಂಸ್ಥಾಪಕ ಬಿ.ಜೆ.ಅನಂತ ಪದ್ಮನಾಭರಾವ್, ಚಂದ್ರಿಕಾ, ಸಂಧ್ಯಾ, ಕಾರ್ಯದರ್ಶಿ ವಿಜಯಲಕ್ಷ್ಮಿ, ಮಾಲತಿ, ಪರಿಮಳಾ, ಅಂಜನಾ, ಅಕ್ಷತಾ, ಕುಸುಮಾ, ಲತಾ, ಡಿವಿಎಸ್ ಸಂಸ್ಥೆ ಆಡಳಿತಾಧಿಕಾರಿ ಗುರುಸಿದ್ದೇಶ್, ಮೂರ್ತಿ, ವೆಂಕಟಾದ್ರಿ ಶ್ರೇಷ್ಠಿ ಹಾಗೂ ಚಿತ್ರದುರ್ಗ ಮಧ್ವ ಸಮಾಜದ ಸದಸ್ಯರಿದ್ದರು.