ಭದ್ರಾವತಿ: ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪ್ರಯತ್ನದಿಂದಾಗಿ ಸಿಕ್ಕ ಅನುದಾನದಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಪೇ ಜಲ್ ಸರ್ವೇಕ್ಷಣೆಗೆ ರಾಜ್ಯದಿಂದ ಭದ್ರಾವತಿ ನಗರಸಭೆ ಆಯ್ಕೆಯಾಗಿದ್ದು, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.
ಆಹಾರ, ಆರೋಗ್ಯ ಹಾಗೂ ವಸತಿ ಸೇರಿ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಹೆಚ್ಚಿನ ಅನುದಾನ ತಂದಿರುವ ಶಾಸಕರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2048 ಗುಂಪು ಮನೆಗಳ ನಿರ್ಮಾಣಕ್ಕೆ ಬುಳ್ಳಾಪುರ ಸರ್ವೇ ನಂ.55ರಲ್ಲಿ 150 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತರೀಕೆರೆ ರಸ್ತೆಯ ಗಾಂಧಿವೃತ್ತ ಸಮೀಪದ ಕನ್ಸರ್ವೆನ್ಸಿ ರಸ್ತೆಗೆ 2.15 ಕೋಟಿ ರೂ., ಬಸವೇಶ್ವರ ವೃತ್ತ ಅಭಿವೃದ್ಧಿಗೆ 44 ಲಕ್ಷ, ಕೆಎಸ್ಆರ್ಟಿಸಿ ಡಿಪೋ ಬಳಿ ಮತ್ತು ಜನ್ನಾಪುರದ ಕಮರ್ಶಿಯಲ್ ಸ್ಟ್ರೀಟ್ ಬಳಿ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸುಸಜ್ಜಿತ ುಡ್ಕೋರ್ಟ್ ನಿರ್ಮಿಸಲು ವಿಸ್ತೃತ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ, ಉದ್ಯಮಗಳು, ಟ್ರಸ್ಟ್ಗಳು, ಆಸ್ಪತ್ರೆಗಳು, ಹೋಟೆಲ್ ಹಾಗೂ ಮನೋರಂಜನಾ ಕೇಂದ್ರಗಳು ತಮ್ಮ ನಾಮಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸಬೇಕೆಂಬ ಅಧಿಸೂಚನೆಯಂತೆ ಕ್ರಮ ಕೈವಹಿಸಲಾಗುತ್ತಿದೆ.
ಮಾಧವಾಚಾರ್ ವೃತ್ತದಿಂದ ರಂಗಪ್ಪ ವೃತ್ತದವರೆಗಿನ ರಸ್ತೆಗೆ ಡಾ. ರಾಜ್ಕುಮಾರ್ ರಸ್ತೆ ಎಂದು ನಾಮಕರಣ, ಅಂಡರ್ಬ್ರಿಡ್ಜ್ ಬಳಿ 12 ಅಡಿ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕವಲಗುಂದಿ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ನಗರದ ಕೂಲಿಬ್ಲಾಕ್ ಶೆಡ್, ಅಂಜನೇಯ ಅಗ್ರಹಾರ, ಚಾಮೇಗೌಡ ಏರಿಯಾ, ಜಿಂಕ್ಲೈನ್, ಜೆಪಿಎಸ್ ಪಾರ್ಕ್, ಉಜ್ಜನೀಪುರ ಸೇರಿ ನಗರದ ಕೆಲವೆಡೆ ಸಮುದಾಯ ಶೌಚಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪರಿಸರ ಅಭಿಯಂತ ಪ್ರಭಾಕರ್, ಕಂದಾಯ ಅಧಿಕಾರಿ ರಾಜ್ಕುಮಾರ್, ಮಹಮದ್ ಗೌಸ್ ಇತರರಿದ್ದರು.