ಮುಳಬಾಗಿಲು: ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತವಾಗಿಸಲು ಬಿಜೆಪಿ ಮುಂದಾಗಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ನಗರದ ವೀರಭದ್ರನಗರದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಬೂತ್ ವಿಜಯ್ ಅಭಿಯಾನ ಆಯೋಜಿಸಲಾಗಿದೆ ಎಂದರು.
ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದೆವು. ಆದರೆ, ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದೇ ಪಕ್ಷದವರು ಅವರಿಗೆ ಮೋಸ ಮಾಡುತ್ತಿರುವ ಬಗ್ಗೆ ಶ್ರೀಘ್ರದಲ್ಲೇ ವಿಚಾರ ಹೊರಬರಲಿದೆ. ಕೋಲಾರ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲು ಅವರ ಸಮುದಾಯದವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದು ಮೇಲೆ ಅವರ ಸಮುದಾಯದವರಿಗೆ ವಿಶ್ವಾಸ ಇಲ್ಲ ಎಂದು ದೂರಿದರು.
ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ರ್ಖಗೆ, ಡಾ.ಜಿ.ಪರಮೇಶ್ವರ, ವರ್ತೂರು ಪ್ರಕಾಶ್ ಅವರನ್ನು ಚುನಾವಣೆಗಳಲ್ಲಿ ಸಿದ್ದರಾಮಯ್ಯ ಸೋಲಿಸುವ ಮೂಲಕ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ಸೋನಿಯಾಗಾಂಧಿ, ರಾಹುಲ್ಗಾಧಿ ಬಂದು ಕೋಲಾರದಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಕೆ.ಅಶೋಕ್, ನಗರಾಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್, ಪ್ರಧಾನಕಾರ್ಯದರ್ಶಿ ನಂಗಲಿ ವಿಶ್ವನಾಥರೆಡ್ಡಿ, ಬೆಳಗಾನಹಳ್ಳಿ ರಮೇಶ್, ಜಿಲ್ಲಾ ಖಜಾಂಚಿ ಕಾರ್ಪತಿ ಕೆ.ಜಿ.ವೆಂಕಟರವಣ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ, ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತಿತರರು ಇದ್ದರು.