ಕಾರವಾರ: ಮಂಕಿ ಚಿತ್ತಾರ ಪ್ರೌಢಶಾಲೆಯ ಶಿಕ್ಷಕ ಪ್ರಕಾಶ ನಾಯ್ಕ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡರು.
ಬೆಂಗಳೂರಿನಲ್ಲಿ ಮಂಗಳವಾರ ಆಯೋಜನೆಯಾದ ಸಮಾರಂಭದಲ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಪರಿಚಯ
ಕುಮಟಾ ತಾಲೂಕಿನ ಅಳ್ವೆಕೋಡಿ ಗ್ರಾಮದ ಪ್ರಕಾಶ ನಾಯ್ಕ ಹಾಸನದ ಅರಕಲಗೂಡು, ಉಡುಪಿಯ ಕಾರ್ಕಳ ಮುಂತಾದೆಡೆ ಕಾರ್ಯನಿರ್ವಹಿಸಿ 2015 ರಿಂದ ಹೊನ್ನಾವರ ತಾಲೂಕಿನ ಚಿತ್ತಾರ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಫಾರ್ ಫ್ಯೂಚರ್' ಸುಲಭ ಇಂಗ್ಲಿಷ್ ಕಲಿಕಾ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದಾರೆ.
ಅವರು ರಚಿಸಿ ನಿರ್ದೇಶಿಸಿದ
ಪರಿಸರ ಜಾಗೃತಿ’ ಜಾನಪದ ರೂಪಕವು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ಕಂಡಿದೆ.
ಜಿಲ್ಲಾ ವರ್ಕ್ ಬುಕ್ ಸಮಿತಿ ಸದಸ್ಯರಾಗಿ, ಸಪ್ಲಿಮೆಂಟರಿ ಬುಕ್ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ನಾಲ್ಕು ಪುಸ್ತಕ ರಚಿಸಿದ್ದಾರೆ. ಮುಖ್ಯವಾಗಿ 6 ಮಕ್ಕಳ ನಾಟಕಗಳನ್ನು ರಚಿಸಿ ಅದನ್ನು ಮಕ್ಕಳಿಂದ ಆಡಿಸಿ ಯಶಸ್ವಿಯಾಗಿದ್ದಾರೆ. ಅವರ ಕಿರು ಸಂದರ್ಶನ ಇಲ್ಲಿದೆ.
ವೃತ್ತಿ ಆಧಾರಿತ ಶಿಕ್ಷಣ ಇಂದಿನ ಅಗತ್ಯ
*ಪ್ರಸ್ತುತ ಜಗತ್ತಿಗೆ ಶಿಕ್ಷಣ ಪದ್ಧತಿ ಹೇಗಿರಬೇಕು ಮತ್ತು ಯಾವ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು..?
ಉತ್ತರ:- ಮಕ್ಕಳಿಗೆ ವೃತ್ತಿ ಆಧಾರಿತ ಶಿಕ್ಷಣ ಕೊಟ್ಟರೆ ತುಂಬ ಒಳ್ಳೆಯದು. ಆಯ್ದ ಶಾಲೆಗಳಲ್ಲಿ ಕೊಡುತ್ತಿರುವ ರಾಷ್ಟ್ರೀಯ ಕೌಶಲ್ಯ ಆಧಾರಿತ ಶಿಕ್ಷಣವನ್ನು ಎಲ್ಲ ಹೈಸ್ಕೂಲ್ಗಳಿಗೆ ವಿಸ್ತರಿಸಿದರೆ ಒಳ್ಳೆಯದು.
ಇದರಿಂದ ಮುಂದೆ ಆತ ತನ್ನಿಚ್ಛೆಯ ವೃತ್ತಿ ಆಯ್ದುಕೊಳ್ಳಲು, ಉಪ ಉದ್ಯೋಗ ಮಾಡಲು, ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕಿದಂತಾಗುತ್ತದೆ.
ಮಕ್ಕಳ ಸಮಸ್ಯೆ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿದರೆ ಹೆಚ್ಚು ಅನುಕೂಲ. ಶಿಕ್ಷಣದಲ್ಲಿ ರಂಗ ಕಲೆ ಹಾಗೂ ಸಂವಹನ ಸ್ವರೂಪದ ಪಾಠ ಹೆಚ್ಚು ಪರಿಣಾಮಕಾರಿಯಾಗಿದೆ.
ರಂಗ ಕಲೆಯ ಮೂಲದಿಂದ ಬಂದ ಪ್ರತಿ ಮಗು ಕನಿಷ್ಠ ಶೇ.80 ರಷ್ಟು ಅಂಕ ಪಡೆಯುತ್ತದೆ.ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.
ಪಾಠಗಳ ಪ್ರಮುಖಾಂಶಗಳನ್ನು ಪಿಪಿಟಿ ಅಥವಾ ವಿಡಿಯೋ ರೂಪದಲ್ಲಿ ಮಾಡಿದರೆ ಅದು ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಐಸಿಟಿ ಮಕ್ಕಳಿಗೆ ಬಹಳ ಅನುಕೂಲವಾಗಿದೆ.
ನಿಮ್ಮಸಾಧನೆಗೆ ಪ್ರೇರಣೆ ಏನು..?
ಉತ್ತರ: ಮಕ್ಕಳು ಹೊಸತು ಕಂಡರೆ ಶೀಘ್ರದಲ್ಲಿ ಅದನ್ನು ಸ್ವೀಕರಿಸುತ್ತಾರೆ. ನಾನು ಕಲಿಕೆಯಲ್ಲಿ ತಂದ ಹೊಸತನ ಮಕ್ಕಳಿಗೆ ತಲುಪಿದೆ ಎಂದುಕೊಂಡಿದ್ದೇನೆ. ಕಲಿತ ಮಕ್ಕಳ ಪ್ರೀತಿ, ಪಾಲಕರು, ಸಹಶಿಕ್ಷಕರ ಸಹ ಶಿಕ್ಷಕರ ಸಹಕಾರ, ಹಿರಿಯ ಅಧಿಕಾರಿಗಳ ಪ್ರೋತ್ಸಾಹ ನನ್ನೆಲ್ಲ ಕಾರ್ಯಗಳಿಗೆ ಪ್ರೇರಣೆ ಯಾಗಿದೆ.
ಪ್ರಶಸ್ತಿ ಬಂದಿದ್ದು ಹೇಗನ್ನಿಸುತ್ತದೆ..
ಉತ್ತರ:- ಸಾಮಾನ್ಯವಾಗಿ ರಾಜ್ಯ ಪ್ರಶಸ್ತಿ ಬರಬೇಕು ಎಂದರೆ 50 ವರ್ಷ ದಾಟಬೇಕು ಎನ್ನಲಾಗುತ್ತದೆ. 40 ವರ್ಷಕ್ಕೇ ನನಗೆ ಪ್ರಶಸ್ತಿ ಬಂದಿರುವುದರಿಂದ ಇನ್ನಷ್ಟು ಕೆಲಸ ಮಾಡಬೇಕು ಎಂಬ ಪ್ರೇರಣೆ ಸಿಕ್ಕಿದೆ.