ಬೆಂಗಳೂರು: ಶುಕ್ರವಾರ ಮಧ್ಯಾಹ್ನ ಕಾಣೆಯಾಗಿದ್ದ ಟೆಕ್ಕಿ ಸಚಿನ್ಗಾಗಿ ಶನಿವಾರ ಬೆಳಗ್ಗೆ 7 ಗಂಟೆಯಿಂದ ಅಗ್ನಿಶಾಮಕ ದಳ ಹಾಗೂ ಎನ್ಡಿಆರ್ಎಫ್ ಸಿಬ್ಬಂದಿ 5 ರೋಯಿಂಗ್ ಬೋಟ್ ಬಳಸಿ ಕೆರೆಯ ಮುಖ್ಯ ದ್ವಾರದಿಂದ 100 ಮೀಟರ್ ಸುತ್ತಮುತ್ತ ಶೋಧ ನಡೆಸಿದರೂ ಯಾವ ಪ್ರಯೋಜನವಾಗಿಲ್ಲ.
ಶನಿವಾರ ಕತ್ತಲಾಗುವವರೆಗೆ ಶೋಧ ನಡೆಸಿದ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಮತ್ತೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ.
ಯಲಹಂಕದ ಅಲ್ಲಾಳಸಂದ್ರ ಕೆರೆಯಲ್ಲಿ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈಜಲು ಬಂದಿದ್ದ ಟೆಕ್ಕಿ ಸಚಿನ್ ನಂತರ ಕೆರೆಯಲ್ಲಿ ಮುಳುಗಿದ್ದಾನೆ. ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟೆಕ್ಕಿ ಸಚಿನ್ ವೀರಾಜಪೇಟೆ ತಾಲೂಕಿನ ಹಾತೂರು ಗ್ರಾಮದ ಕೊಂಗೇಪಂಡ ಮಾಚಯ್ಯ ಅವರ ಪುತ್ರ. ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಸಚಿನ್. ಜನವರಿಯಲ್ಲಿ ನೂತನ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಸಚಿನ್ ಮಾಚಯ್ಯ ಉತ್ತಮ ಹಾಕಿಪಟುವಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೊಡಗಿನಿಂದ ಬೆಂಗಳೂರಿಗೆ ಸಚಿನ್ ಸಂಬಂಧಿಕರು ಆಗಮಿಸಿದ್ದಾರೆ. (ದಿಗ್ವಿಜಯ ನ್ಯೂಸ್)