More

    ಕರೊನಾ ಸೋಂಕು ತಗುಲುವ ಭಯದಲ್ಲೇ ಓಡಾಡುತ್ತಿರುವ ಸಿಲಿಕಾನ್​ ಸಿಟಿ ಜನರನ್ನು ಬೆಚ್ಚಿಬೀಳಿಸಿದ ಐಸ್ಕ್ರೀಂ ಬಾಲ್​!

    ಬೆಂಗಳೂರು: ಕರೊನಾ ಸೋಂಕು ತಗುಲುವ ಭಯದಲ್ಲೇ ಓಡಾಡುತ್ತಿರುವ ನಗರದ ಜನರನ್ನು ಗುರುವಾರ ಕೆಲ ಗಂಟೆ ಕಾಲ ಐಸ್ಕ್ರೀಂ ಬಾಲ್ ಬೆಚ್ಚಿಬೀಳಿಸಿತ್ತು! ಬಾಂಬ್ ಆಕಾರದ ವಸ್ತು ಕಂಡು ಭೀತಿ ಆವರಿಸಿತ್ತು. ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಗಳು 2 ಗಂಟೆ ಪರಿಶೀಲಿಸಿ ನಡೆಸಿದ ನಂತರ ಅದೊಂದು ಐಸ್ಕ್ರೀಂ ಬಾಲ್ ಎಂಬುದು ಗೊತ್ತಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

    ಬೆಳಗ್ಗೆ 10.30ರಲ್ಲಿ ಕತ್ರಿಗುಪ್ಪೆ ಸಮೀಪದ ಅಶೋಕನಗರ ಜಂಕ್ಷನ್​ನಲ್ಲಿ ಸ್ಥಳೀಯ ಜನರಿಗೆ ಅನುಮಾನಾಸ್ಪದ ವಸ್ತು ಕಂಡಿತ್ತು. ಕರೊನಾ ವೈರಸ್ ಸೋಂಕು ಹರಡುವ ಭೀತಿಯಲ್ಲಿದ್ದ ಜನರು ಬಾಂಬ್ ಮಾದರಿ ವಸ್ತು ಕಂಡು ಗಾಬರಿಗೊಂಡರು. ‘ನಮ್ಮ-100’ಗೆ ಬಂದ ಕರೆ ಮೇರೆಗೆ ಹನುಮಂತನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ಗುಂಪುಗೂಡಿದ್ದ ಜನರನ್ನು ಚದುರಿಸಿ ಇಡೀ ಪ್ರದೇಶವನ್ನು ಸುತ್ತುವರಿದು ಸುಪರ್ದಿಗೆ ಪಡೆದರು. ಅಷ್ಟೊತ್ತಿಗೆ ಸುತ್ತಲ ಪ್ರದೇಶದ ಜನರು ಜಮಾಯಿಸಿದ್ದರು.

    ಇದನ್ನೂ ಓದಿ: ದುಡಿದ ಹಣವನ್ನೆಲ್ಲ ದೇವಸ್ಥಾನಕ್ಕೆ ನೀಡುತ್ತಿದ್ದ ಈ ವ್ಯಕ್ತಿ ನೆರೆಮನೆ ದಂಪತಿಯ ಕೊಲೆ ಮಾಡುವಷ್ಟು ಕೆಟ್ಟವನಾಗಿದ್ದೇಕೆ?

    ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಆ ಅನುಮಾನಾಸ್ಪದ ವಸ್ತುವನ್ನು ಅಲ್ಲಿಂದ ಸಮೀಪದ ಕೆಂಪೇಗೌಡ ಕ್ರೀಡಾಂಗಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಟ್ಟು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

    ಹಲವು ಹಂತದ ಪರಿಶೀಲನೆ ಬಳಿಕ ಐಸ್ ಕ್ರೀಂನ ಖಾಲಿ ಬಾಲ್​ನಲ್ಲಿ ಪಟಾಕಿ ತಯಾರಿಕೆಗೆ ಬಳಸುವ ಸಿಡಿಮದ್ದು ತುಂಬಿರುವುದು ಗೊತ್ತಾಗಿದೆ. ಲಾಕ್​ಡೌನ್ ಸಮಯದಲ್ಲಿ ಯಾವ ಉದ್ದೇಶಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಇಲ್ಲಿಗೆ ಇದನ್ನು ಎಸೆದವರು ಯಾರೆಂಬುದು ತಿಳಿದುಬಂದಿಲ್ಲ.ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಫ್​ಎಸ್​ಎಲ್ ಸಿಬ್ಬಂದಿಯೂ ಅನುಮಾನಾಸ್ಪದ ವಸ್ತುವಿನ ಮಾದರಿ ಪಡೆದಿದ್ದಾರೆ. ವರದಿ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಡಾ. ರೋಹಿಣಿ ಸಪೆಟ್ ಕಟೋಚ್ ತಿಳಿಸಿದ್ದಾರೆ.

    ಕತ್ರಿಗುಪ್ಪೆ ಸಮೀಪದ ಅಶೋಕನಗರ ಜಂಕ್ಷನ್​ನಲ್ಲಿ ಸಿಕ್ಕಿರುವ ವಸ್ತು ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ಶ್ವಾನ ದಳ, ಬಾಂಬ್ ಪತ್ತೆ ದಳ, ಎಫ್​ಎಸ್​ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ.

    | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ

    ಈ ಹಿಂದೆಯೂ ಭೀತಿ

    ಕಳೆದ ಅಕ್ಟೋಬರ್ 29ರಂದು ರಾಜಾಜಿನಗರ ಕೈಗಾರಿಕಾ ಪ್ರದೇಶದ 76ನೇ ಕ್ರಾಸ್​ನಲ್ಲಿ ರಸ್ತೆ ಬದಿ ವಾರಸುದಾರರು ಇಲ್ಲದ ಸೂಟ್​ಕೇಸ್ ಕಂಡುಬಂದು ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಮುಂಭಾಗ ಪ್ರಸನ್ನ ಚಿತ್ರಮಂದಿರ ರಸ್ತೆಬದಿ ಸೂಟ್​ಕೇಸ್ ಪತ್ತೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಆವರಿಸಿತ್ತು. ಎರಡೂ ಪ್ರಕರಣದಲ್ಲಿ ಸೂಟ್​ಕೇಸ್ ಪರಿಶೀಲನೆ ನಡೆಸಿದಾಗ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿರಲಿಲ್ಲ.

    VIDEO| ವಾರ್ನರ್ ದಂಪತಿಯ ಬುಟ್ಟ ಬೊಮ್ಮ ಮಸ್ತ್​​​ ಸ್ಟೆಪ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts