More

    ಬೆಂಗಳೂರು ಸುತ್ತಲಿನ ನಗರಗಳಿಗೂ ಉಪನಗರ ರೈಲು ವಿಸ್ತರಣೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರದಲ್ಲಿ ವಾಹನಗಳ ದಟ್ಟಣೆ ನಿಯಂತ್ರಣ, ಜನರ ಸಮಸ್ಯೆ ಬಗೆಹರಿಸಲು ಉದ್ದೇಶಿತ ಉಪನಗರ ರೈಲ್ವೆ ಯೋಜನೆ ಸೌಲಭ್ಯವನ್ನು ಸುತ್ತಮುತ್ತಲಿನ ನಗರಗಳಿಗೂ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

    ಕರ್ನಾಟಕ ರೈಲ್ವೆ ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್)ದ ಉನ್ನತ ಅಧಿಕಾರಿಗಳೊಂದಿಗೆ ಉಪನಗರ ರೈಲು ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಸಿದ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಸರ್ಕಾರದ ಅಪೇಕ್ಷೆಯನ್ನು ಬಹಿರಂಗಪಡಿಸಿದ್ದಾರೆ.

    ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು ಹಾಗೂ ಬಂಗಾರಪೇಟೆಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ರೈಲ್ವೆ ಸಚಿವಾಲಯದ ಅನುಮತಿ ಕೋರಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

    ಹಂತ-1ರಲ್ಲಿ ಉಪನಗರ ರೈಲು ಯೋಜನೆ ಕಾಮಗಾರಿ (148.17 ಕಿ.ಮೀ.) ನಡೆಯುತ್ತಿದೆ. ಇದನ್ನು ಆಸುಪಾಸಿನ ಹಲವು ನಗರಗಳಿಗೆ ವಿಸ್ತರಿಸುವ ಅಗತ್ಯವಿದೆ. ಈ ಸಂಬಂಧ ಜೂ.6ರಂದು ಸಭೆ ನಡೆಸಿದ್ದು, ಪ್ರಸ್ತಾವನೆಗೆ ಕೆ-ರೈಡ್ ತಾಂತ್ರಿಕ ಒಪ್ಪಿಗೆ ನೀಡಿದೆ. ಮುಂದಿನ ಹೆಜ್ಜೆಯಾಗಿ ನೈಋತ್ಯ ರೈಲ್ವೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

    ಉಪನಗರ ರೈಲು ಯೋಜನೆಯ ಹಂತ-1ರ ಕಾಮಗಾರಿಗಳು ಅಬಾಧಿತವಾಗಿ ಮುಂದುವರಿದುಕೊಂಡು ಹೋಗಲಿವೆ. ಆದರೆ ಹಂತ-2ನ್ನು 452 ಕಿ.ಮೀ.ಗಳಿಗೆ ವಿಸ್ತರಿಸಲು ಯೋಚಿಸಲಾಗಿದೆ. ನಿಯಮಗಳ ಪ್ರಕಾರ ರಾಜ್ಯ ಸರ್ಕಾರದ ಸಂಸ್ಥೆಯು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ರೈಲ್ವೆ ಮಂಡಳಿಯೇ ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

    ಉಪನಗರ ರೈಲು ಯೋಜನೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಮಭಂಧಿಸಿದ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ರೈಲು ವ್ಯವಸ್ಥೆಗೆ ಬೇಕಾದ ಬೋಗಿಗಳ ತಯಾರಿಕೆಗೆ ಬಿಡ್ ಅಂತಿಮಗೊಳಿಸಿದ್ದು, ಕೆಲವೇ ದಿನಗಳಲ್ಲಿ ಯೋಜನೆಯ ಕಾಮಗಾರಿಯನ್ನೂ ಖುದ್ದಾಗಿ ಪರಿಶೀಲಿಸುವೆ ಎಂದರು.

    ಯೋಜನೆಗೆ ಬೇಕಾಗಿದ್ದ 177.22 ಎಕರೆ ಪೈಕಿ 164 ಎಕರೆ ಜಮೀನು ಸ್ವಾಧೀನವಾಗಿದೆ. ಉಳಿದ 12.39 ಎಕರೆ ರಕ್ಷಣಾ ಇಲಾಖೆ ಮತ್ತು ಸರ್ಕಾರದ್ದಾಗಿದ್ದು, ಸ್ವಲ್ಪ ಕಗ್ಗಂಟಾಗಿದೆ. ಸಂಬಂಧಿಸಿದವರ ಜತೆಗೆ ಮಾತುಕತೆ ನಡೆಸಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಎಂ.ಬಿ.ಪಾಟೀಲ್, ಯೋಜನೆಯ ಭಾಗವಾಗಿ ಸೋಲದೇವನಹಳ್ಳಿ ಮತ್ತು ದೇವನಹಳ್ಳಿಯಲ್ಲಿ ಎರಡು ಡಿಪೋ ನಿರ್ಮಿಸಲಾಗುವುದು ಎಂದು ಹೇಳಿದರು.
    ಸಭೆಯಲ್ಲಿ ಕೆ.ರೈಡ್ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ, ಯೋಜನಾ ನಿರ್ದೇಶಕ ರಾಜೇಂದ್ರಕುಮಾರ್ ಸಿಂಗ್, ಇನ್ನಿತರ ಅಧಿಕಾರಿಗಳು ಇದ್ದರು.

    ಸಬ್ ಅರ್ಬನ್ ರೈಲು ವಿಸ್ತರಣೆ ರೂಪರೇಷೆ

    ಮೊದಲ ಹಂತ ಒಟ್ಟು 148 ಕಿ.ಮೀ.
    ಬೆಂಗಳೂರು ನಗರ- ದೇವನಹಳ್ಳಿ: 41.4 ಕಿ.ಮೀ.
    ಬೈಯಪ್ಪನಹಳ್ಳಿ- ಚಿಕ್ಕಬಾಣಾವರ: 25.01 ಕಿ.ಮೀ.
    ಕೆಂಗೇರಿ- ವೈಟ್‌ಫೀಲ್ಡ್: 35.32 ಕಿ.ಮೀ.
    ಹೀಳಲಿಗೆ- ರಾಜಾನುಕುಮಟೆ: 46 ಕಿ.ಮೀ.

    ಎರಡನೇ ಹಂತ ಒಟ್ಟು 452 ಕಿ.ಮೀ.
    ದೇವನಹಳ್ಳಿ- ಕೋಲಾರ: 107 ಕಿ.ಮೀ.
    ಚಿಕ್ಕಬಾಣಾವರ- ದಾಬಸ್‌ಪೇಟೆ- ತುಮಕೂರು: 55 ಕಿ.ಮೀ.
    ಚಿಕ್ಕಬಾಣಾವರ- ಮಾಗಡಿ: 45 ಕಿ.ಮೀ.
    ಕೆಂಗೇರಿ- ಮೈಸೂರು: 125 ಕಿ.ಮೀ.
    ವೈಟ್‌ಫೀಲ್ಡ್- ಬಂಗಾರಪೇಟೆ: 45 ಕಿ.ಮೀ.
    ಹೀಳಲಿಗೆ- ತಮಿಳುನಾಡಿನ ಹೊಸೂರು: 23 ಕಿ.ಮೀ.
    ರಾಜಾನುಕುಂಟೆ- ದೊಡ್ಡಬಳ್ಳಾಪುರ- ಗೌರಿಬಿದನೂರು: 52 ಕಿ.ಮೀ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts