ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಕುರಿತು ಟ್ವಿಟರ್ನಲ್ಲಿ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ವೈಭವ್ ಗಣೇಶ್ (20) ಎಂದು ಗುರುತಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಫ್ಯೂಚರ್ ಎಫ್ಟಿಸುಫ್ಜಾನ್ (@futureftsufjan) ಹೆಸರಿನ ಟ್ವಿಟರ್ ಖಾತೆಯಲ್ಲಿ ಡಿಸೆಂಬರ್ 10ರಂದು ರಾತ್ರಿ 10.15ಕ್ಕೆ ಟ್ವೀಟ್ ಮಾಡಲಾಗಿತ್ತು. ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುತ್ತೇನೆ. ಹೀಗಾಗಿ ಅವರು ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ನಿಲ್ದಾಣವನ್ನು ಮರು ನಿರ್ಮಿಸಬೇಕಾಗುತ್ತದೆ ಎಂದು ಆರೋಪಿ ಟ್ವೀಟ್ ಮಾಡಿದ್ದ.
ಆರೋಪಿಗೆ ಟ್ವಿಟರ್ನಲ್ಲಿ ಹೆಚ್ಚು ಫಾಲೋವರ್ಸ್ ಇಲ್ಲದ ಕಾರಣ ಟ್ವೀಟ್ ಬಹುಬೇಗನೆ ಗಮನಕ್ಕೆ ಬಂದಿರಲಿಲ್ಲ. ಕೆಲವು ದಿನಗಳ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಟ್ವೀಟ್ ವಿರುದ್ಧ ದೂರು ನೀಡಿದ್ದರು. ಎಫ್ಐಆರ್ ಸಹ ದಾಖಲಾಗಿತ್ತು.
ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ಎನ್ಸಿಆರ್ ದಾಖಲಿಸಿದ್ದರು. ಆದರೆ, ದೇವನಹಳ್ಳಿ ಸಿವಿಲ್ ನ್ಯಾಯಾಧೀಶರು ಆದೇಶಿಸಿದ ಬಳಿಕ ಎಫ್ಐಆರ್ ದಾಖಲಾಗಿ, ತನಿಖೆ ಆರಂಭವಾಗಿತ್ತು. ಇದೀಗ ಆರೋಪಿ ವೈಭವ್ ಗಣೇಶನನ್ನು ಬಂಧಿಸಲಾಗಿದೆ. ಬಂಧಿತನ ವಿರುದ್ಧ ಸಾರ್ವಜನಿಕ ಕಿಡಿಗೇಡಿತನ ಮತ್ತು ಕ್ರಿಮಿನಲ್ ಬೆದರಿಕೆಯೊಡ್ಡಿದ ಹೇಳಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಮಾತನಾಡಿದ್ದು, ಕೆಲದಿನಗಳ ಹಿಂದೆ ಟ್ವಿಟರ್ನಲ್ಲಿ ಓರ್ವ ವ್ಯಕ್ತಿ ಏರ್ಪೊರ್ಟ್ಗೆ ಬೆದರಿಕೆ ಹಾಕಿದ್ದ. ಆತನ ಹೆಸರು ವೈಭವ್ ಗಣೇಶ್. ಆತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಬೆಂಗಳೂರು ಟ್ರಾಫಿಕ್ ಜಾಮ್ನಿಂದ ಬೇಸತ್ತು ಈ ರೀತಿ ಮಾಡಿದೆ ಅಂತ ಆರೋಪಿ ಬಾಯಿಬಿಟ್ಟ. ಪರಪ್ಪನ ಅಗ್ರಹಾರದ ಕೂಡ್ಲು ಗೇಟ್ನಿಂದ ಏರ್ಪೊರ್ಟ್ಗೆ ಆತ ಪ್ರಯಾಣ ಮಾಡಿದ್ದ. ಈ ವೇಳೆ ಟ್ರಾಫಿಕ್ ಜಾಮ್ ಜಾಸ್ತಿಯಾಗಿತ್ತು. ಇದರಿಂದ ಬೇಸತ್ತು ಕುಲ್ಲಕ್ಷ ಕಾರಣಕ್ಕಾಗಿ ವೈಭವ್ ಗಣೇಶ್ ಈ ರೀತಿ ಮಾಡಿದ್ದಾನೆ. ಮೂಲತ ಪಂಜಾಬ್ ರಾಜ್ಯದವನಾಗಿದ್ದು, ಪಾಲಕರ ಜತೆ ಬೆಂಗಳೂರಿನ ಕೊಡ್ಲು ಗೇಟ್ ಬಳಿ ಆರೋಪಿ ವಾಸವಾಗಿದ್ದ ಎಂದು ತಿಳಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಟ್ವೀಟ್ ಮೂಲಕ ಬೆದರಿಕೆ: ಎಫ್ಐಆರ್ ದಾಖಲು
ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗ್ತಿದ್ದ ಖದೀಮನಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು!
ಅಮೆರಿಕದಲ್ಲಿ ಉದ್ಯೋಗ, ಕೋಟಿ ರೂ. ಸಂಬಳ: ಲಕ್ಷುರಿ ಲೈಫ್ ಬಿಟ್ಟು ಸನ್ಯಾಸತ್ವ ಬಯಸಿದ ಭಾರತದ ಯುವ ವಿಜ್ಞಾನಿ