ವಿಜಯಪುರ: ನಗರ ಸಮೀಪದ ಇಟ್ಟಂಗಿಹಾಳ ಹತ್ತಿರ ಫುಡ್ಪಾರ್ಕ್ ನಿರ್ಮಿಸಬೇಕೆಂದು ಜಿಲ್ಲೆಯ ರೈತರ ಹಾಗೂ ಉದ್ಯಮಿಗಳ ನಿಯೋಗ ಶನಿವಾರ ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಭೇಟಿ ಮಾಡಿ ವಿನಂತಿಸಲಾಯಿತು.
ಜಿಲ್ಲೆಯಲ್ಲಿ ಸಣ್ಣ ಉದ್ಯಮ ಆರಂಭಿಸುವಂತೆ ನ.30 ರಂದು ಶಾಸಕ ಎಂ.ಬಿ. ಪಾಟೀಲ ಅವರು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಪತ್ರ ಬರೆದಿದ್ದರು. ಆ ಹಿನ್ನೆಲೆ ರೈತರ ನಿಯೋಗ ಸಚಿವರನ್ನು ಭೇಟಿ ಮಾಡಿ, ಇಟ್ಟಂಗಿಹಾಳ ಹತ್ತಿರ ಫುಡ್ಪಾರ್ಕ್ ನಿರ್ಮಿಸಲು 72 ಎಕರೆ ಜಮೀನನ್ನು ಈಗಾಗಲೇ ಮೀಸಲಿರಿಸಲಾಗಿದ್ದು, ಇಲ್ಲಿಯೇ ಫುಡ್ಪಾರ್ಕ್ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿದೆ ಎಂದು ನಿಯೋಗದ ಸದಸ್ಯರು ಮನವಿ ಮಾಡಿದರು.
ಜಿಲ್ಲೆಯು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿದೆ. ದಾಳಿಂಬೆ, ನಿಂಬೆ, ದ್ರಾಕ್ಷಿ, ಮಾವು, ಬಾರೆ, ಪೆರಲ ಹಾಗೂ ಇತರ ಅನೇಕ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ರೈತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ, ಸಂಸ್ಕರಣೆ ಹಾಗೂ ತಯಾರಿಕೆ ಅನುಕೂಲತೆಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಬಿ.ಸಿ. ಪಾಟೀಲರು, ಶೀಘ್ರದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಫುಡ್ಪಾರ್ಕ್ ಸ್ಥಾಪನೆಗೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಎಪಿಎಂಸಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ದ್ರಾಕ್ಷಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಡಾ. ಕೆ.ಎಸ್. ಮುಂಬಾರೆಡ್ಡಿ, ಬಿಎಲ್ಡಿಇ ನಿರ್ದೇಶಕ ಬಸನಗೌಡ ಎಂ. ಪಾಟೀಲ, ಪ್ರಗತಿಪರ ರೈತರಾದ ದುಂಡಪ್ಪ ಬಡ್ರಿ, ಅಜೇಯ ಪಾಟೀಲ ಹಣಮಾಪುರ ನಿಯೋಗದಲ್ಲಿದ್ದರು.