ಬಳ್ಳಾರಿ: ಸಿರಗುಪ್ಪ ತಾಲೂಕು ಶಾನವಾಸಪುರ ಗ್ರಾಮದ ಶಿರೀನ್ ತಾಜ್, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ವಿಮ್ಸ್ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ಗ್ರಾಮದ ಮಾಬಾಷಾ ಜ.22ರಂದು ಪುತ್ರಿ ಶಿರೀನ್ ತಾಜ್ರನ್ನು ವಿಮ್ಸ್ಗೆ ಕರೆ ತಂದಿದ್ದರು. ತುರ್ತು ನಿಗಾ ಘಟಕದಿಂದ ಬೇರೆ ವಾರ್ಡ್ಗೆ ತೆರಳಲು ಆಸ್ಪತ್ರೆ ಸಿಬ್ಬಂದಿ ವ್ಹೀಲ್ ಚೇರ್ ನೀಡದ್ದರಿಂದ ತಂದೆ ಮಾಬಾಷಾ ತನ್ನ ಮಗಳನ್ನು ಹೆಗಲಮೇಲೆ ಹೊತ್ತುಕೊಂಡು ಹೋಗಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈಗ ಶಿರೀನ್ ತಾಜ್ರನ್ನು ಶನಿವಾರ ಬೆಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಸೋಮವಾರ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ ಇಸಿಜಿ ಹಾಗೂ ಎಕೋ ಪರೀಕ್ಷೆ ಮಾಡಿರುವ ವೈದ್ಯರು ಸದ್ಯಕ್ಕೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲ. ಒಂದು ವರ್ಷದ ಬಳಿಕ ಬರುವಂತೆ ತಿಳಿಸಿದ್ದಾರೆ ಎಂದು ಶಿರೀನ್ ತಾಜ್ ಕುಟುಂಬದವರು ತಿಳಿಸಿವೆ.
ಕೆಲಸದಿಂದ ಬಿಡುಗಡೆ
ವ್ಹೀಲ್ ಚೇರ್ ನೀಡದೆ ಅಮಾನವೀಯವಾಗಿ ನಡೆದುಕೊಂಡ ವಿಮ್ಸ್ ಸಿಬ್ಬಂದಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹೊರ ಗುತ್ತಿಗೆ ನೌಕರನನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ವಿಮ್ಸ್ ಅಧೀಕ್ಷಕ ಡಾ.ಮರಿರಾಜ್ ತಿಳಿಸಿದ್ದಾರೆ.