ಕಂಪ್ಲಿ: ತುಂಗಭದ್ರಾ ನದಿಗೆ ಶನಿವಾರ ಮಧ್ಯಾಹ್ನದಿಂದ 1.02ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಮೂರನೇ ಬಾರಿ ಸೇತುವೆ ಮುಳುಗುವ ಹಂತ ತಲುಪಿದ್ದು, ಇನ್ನೊಂದು ಗೇಣಿನಷ್ಟು ನೀರು ಬಂದರೆ ಮತ್ತೊಮ್ಮೆ ಸೇತುವೆ ಮುಳುಗಲಿದೆ.
ಸೇತುವೆ ಬಳಿ ಪೊಲೀಸ್ ಕಾವಲಿದ್ದು ಜನ, ವಾಹನವನ್ನು ಅವರು ತಡೆಯುತ್ತಿದ್ಧಾರೆ. ಕಂದಾಯ, ಪುರಸಭೆ, ಪೊಲೀಸ್, ಆರೋಗ್ಯ ಮತ್ತು ಜೆಸ್ಕಾಂ ಇಲಾಖೆಗಳು ಸೂಕ್ತ ಕ್ರಮ ಕೈಗೊಂಡಿವೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ.
ಸೇತುವೆ ಮೇಲೆ ಬಸ್ ಸಂಚಾರ ನಿಂತು ಈಗಾಗಲೇ ಒಂದು ತಿಂಗಳು ಕಳೆದಿದ್ದು, ಇನ್ನೂ ಮುಕ್ತವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಪಕ್ಕದ ಚಿಕ್ಕ ಜಂತಕಲ್ಗೆ ತೆರಳಲು 54ರೂ.ಗಳನ್ನು ವ್ಯಯಿಸಬೇಕಿದೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ ಎಂಬುದು ಸಾರ್ವಜನಿಕರ ಗೋಳು.
ಜಲಸಸ್ಯ, ತ್ಯಾಜ್ಯದ ತೆರವು
ತುಂಗಾಭದ್ರಾ ನದಿ ಸೇತುವೆಯ ಕಂಬಿಗಳಿಗೆ ಅಡರಿದ ಜಲಸಸ್ಯಗಳು, ಮತ್ತಿತರ ತ್ಯಾಜ್ಯವನ್ನು ಚಿಕ್ಕಜಂತಕಲ್ ಗ್ರಾಪಂನಿಂದ ಶನಿವಾರ ತೆರವುಗೊಳಿಸಲಾಯಿತು. ಗ್ರಾಪಂ ಸದಸ್ಯ ಮೋಹನ್ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯುತ್ತಿದೆ. ಸೇತುವೆಯ ಬಲ ಭಾಗದ ರಕ್ಷಣಾ ಕಂಬಿಗಳು ಬಹಳಷ್ಟು ಜಖಂಗೊಂಡಿವೆ. ರಕ್ಷಣಾ ಕಂಬಿಗಳಿಗೆ ಸುತ್ತಿಕೊಂಡ ಜಲಸಸ್ಯಗಳನ್ನು ಸಂಪೂರ್ಣ ತೆರವುಗೊಳಿಸಲು 2 ದಿನಗಳಾಗಬಹುದು. ನಂತರ ಸೇತುವೆ ಪರೀಕ್ಷಿಸಿದ ನಂತರವೇ ಜನ, ವಾಹನಗಳ ಸಂಚಾರಕ್ಕೆ ಅನುಮತಿ ಕೊಡಲಾಗುವುದು ಎಂದು ಗಂಗಾವತಿಯ ಪಿಡಬ್ಲ್ಯೂಡಿ ಎಇಇ ಸುದೇಶ್ ಕುಮಾರ್ ತಿಳಿಸಿದ್ದಾರೆ.
ಪುರಸಭೆ ಆಡಳಿತ ತಟಸ್ಥ
ಈ ಹಿಂದೆ ಕಂಪ್ಲಿ ಪುರಸಭೆಯಿಂದ ಸೇತುವೆ ಕಂಬಿಗಳಿಗೆ ಸಿಲುಕಿದ ಜಲಸಸ್ಯಗಳ ತೆರವು ಮಾಡಲಾಗಿತ್ತು. ಈ ಬಗ್ಗೆ ಗಂಗಾವತಿಯ ಪಿಡಬ್ಲ್ಯುಡಿ ಅಧಿಕಾರಿಗಳು ಆಕ್ಷೇಪವ್ಯಕ್ತಪಡಿಸಿದ್ದರು. ಕಾರಣ ಈ ಬಾರಿ ಪುರಸಭೆ ಆಡಳಿತ ತಟಸ್ಥಗೊಂಡಿದೆ. ಸೂಚನೆ ಸಿಕ್ಕರೆ ತೆರವುಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಹೇಳಿದ್ದಾರೆ. ಜೆಸಿಬಿ ಬಳಸಿದರೆ ಸೇತುವೆಗೆ ಪೆಟ್ಟಾಗಲಿದ್ದು, ಮಾನವ ಸಂಪನ್ಮೂಲ ಬಳಸುವುದಾದರೆ ತೆರವುಗೊಳಿಸಬಹುದು ಎಂದು ಹೇಳಿದ್ದೆವು ಎಂದು ಗಂಗಾವತಿಯ ಪಿಡಬ್ಲ್ಯೂಡಿ ಜೆಇ ವಿಶ್ವನಾಥ ತಿಳಿಸಿದ್ದಾರೆ.