ಬಳ್ಳಾರಿ: ಅವಳಿ ಜಿಲ್ಲೆಯಲ್ಲಿ ಕಾಮಗಾರಿಗಳು ಕುಂಠಿತಗೊಳ್ಳದಂತೆ ಪ್ರಗತಿ ಸಾಧಿಸವುದರ ಜತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು ಎಂದು ಸಂಸದ ವೈ.ದೇವೆಂದ್ರಪ್ಪ ಹೇಳಿದರು. ನಗರದ ಜಿಪಂನ ನಜೀರ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ(ದಿಶಾ)ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಮತ್ತು ಜನರ ನಡುವೆ ಅಧಿಕಾರಿಗಳು ಸೇತುವೆ ಇದ್ದಂತೆ. ಸರ್ಕಾರದ ಯೋಜನೆಯನ್ನು ಜಾರಿಗೆ ತಂದರೆ ಅದನ್ನು ಜನರ ಬಾಗಿಲಿಗೆ ತಲುಪಿಸುವ ಸೇವೆ ನಿಮ್ಮದು. ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ಅದಕ್ಕೆ ಕಾರಣ ಕೂಡ ನೀವು. ಜನರ ಸೇವೆ ಮಾಡಿ, ಅಸಡ್ಡೆ ತೊರಬೇಡಿ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ ಬಸವರಾಜ ಮಾತನಾಡಿ, ಜಿಲ್ಲೆಯಲ್ಲಿ ಶೇ.90 ರಷ್ಟು ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ಮತ್ತು ಶೌಚಗೃಹ ಹಾಗೂ ಆಟದ ಮೈದಾನದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಸಂಸದ ವೈ.ದೇವೆಂದ್ರಪ್ಪ ಪ್ರತಿಕ್ರಿಯಿಸಿ, ಎಲ್ಲಿ ನೋಡಿದರು ಶಾಲೆಗಳ ಸಮಸ್ಯೆ ಇದೆ. ನೀವು ಶೇ.90ರಷ್ಟು ವ್ಯವಸ್ಥೆ ಇದೆ ಎಂದರೆ ಹೇಗೆ? ಎಲ್ಲಲ್ಲಿ ಎನಾಗಿದೆ ಅಂತ ಮಾಹಿತಿ ವರದಿ ತರಿಸಿಕೊಳ್ಳಿ ಎಂದು ಸೂಚಿಸಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಮಾತನಾಡಿದರು.