ಬಳ್ಳಾರಿ: ಡಿಪ್ಲೋಮಾ 1, 3, 5ನೇ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನಗರದ ಡಿಸಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯ ಜೆ.ಪಿ.ರವಿಕಿರಣ್ ಮಾತನಾಡಿ, ಕರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸದೆ, ಮುಂದಿನ ತರಗತಿಗಳಿಗೆ ಕಳುಹಿಸಿ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಮೊಬೈಲ್, ನೆಟ್ವರ್ಕ್ ಸಮಸ್ಯೆಯಿಂದ ಹಳ್ಳಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ನಿಂದ ವಂಚಿತರಾಗಿದ್ದಾರೆ. ಸೆಮಿಸ್ಟರ್ ಪರೀಕ್ಷೆ ಕುರಿತು ಸರ್ಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರೀಕ್ಷೆ ನಡೆಸದಂತೆ ಯುಜಿಸಿ ಸಲಹೆ ನೀಡಿದೆ. ಬಹುತೇಕ ವಿದ್ಯಾರ್ಥಿಗಳು ಮೊದಲ ಡೋಸ್ ಲಸಿಕೆ ಪಡೆದಿಲ್ಲ. ಹೀಗಿರುವಾಗ ಕೆಲ ವಿವಿಗಳು ಪದವಿ ಮತ್ತು ಡಿಪ್ಲೋಮಾ ಪರೀಕ್ಷೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯೆ ಜೆ.ಸೌಮ್ಯಾ ಮಾತನಾಡಿ, ಎಐಡಿಎಸ್ಒ ನಡೆಸಿದ ಬೃಹತ್ ಗೂಗಲ್ ಸಮೀಕ್ಷೆಯಲ್ಲಿ ರಾಜ್ಯದ 46 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ ತಜ್ಞರು, ಪ್ರಾಚಾರ್ಯರು ಭಾಗವಹಿಸಿ ಪರೀಕ್ಷೆ ರದ್ದತಿಗೆ ಒಪ್ಪಿಗೆ ನೀಡಿದ್ದಾರೆ. ಡಿಪ್ಲೋಮಾದಲ್ಲಿ ಕೆಲ ವಿದ್ಯಾರ್ಥಿಗಳಿಗೆ 18ವರ್ಷ ಕೂಡ ತುಂಬಿಲ್ಲ, ಹೀಗಾಗಿ ಅವರು ಲಸಿಕೆ ಹಾಕಿಸಿಕೊಳ್ಳಲು ಬರುವುದಿಲ್ಲ. ಆದ್ದರಿಂದ ಯುಜಿಸಿ ಮಾರ್ಗಸೂಚಿಯಂತೆ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿದರು.