ಬೀಳಗಿ: ನಂಜುಂಡಪ್ಪ ವರದಿ ಪ್ರಕಾರ ಬೀಳಗಿ ಹಿಂದುಳಿದ ತಾಲೂಕು ಎಂದು ಗುರುತಿಸಲಾಗಿತ್ತು. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಪಥದತ್ತ ಸಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಸ್ಥಳೀಯ ಹೆಸ್ಕಾಂ ಉಪವಿಭಾಗ ಕಚೇರಿ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕುಮಟ್ಟದ ಎಲ್ಲ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಬರಬೇಕೆಂಬ ನಿಟ್ಟಿನಲ್ಲಿ 2007ರಲ್ಲಿ ರಾಜ್ಯದ ಪ್ರಥಮ ವಿಧಾನಸೌಧ ಬೀಳಗಿಯಲ್ಲಿ ನಿರ್ಮಾಣವಾಗಿದೆ. ಪ್ರಸ್ತುತ 3 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡನೇ ಮತ್ತು ಮೂರನೇ ಮಹಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ. ತಾಲೂಕಿನ ಎಲ್ಲ ಕ್ಷೇತ್ರದ ಅಭಿವೃದ್ಧಿ ಜತೆಗೆ ಹೆಚ್ಚು ಶಿಕ್ಷಣದ ಕಡೆಗೆ ಒಲವು ನೀಡಲಾಗುತ್ತಿದೆ. ಮುಂಬರುವ ಎರಡು ವರ್ಷದಲ್ಲಿ ಬೀಳಗಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿಯಾಗುವಂತೆ ಮಾಡುವುದು ನನ್ನ ಕನಸಿದೆ. ಈಗಾಗಲೇ 1 ಲಕ್ಷ ಎಕರೆ ಭೂಮಿಯನ್ನು ನೀರಾವರಿ ಮಾಡಲಾಗಿದೆ. ಇನ್ನೆರಡು ವರ್ಷದಲ್ಲಿ ಬೀಳಗಿ ಮತಕ್ಷೇತ್ರ ಸಂಪೂರ್ಣ ನೀರಾವರಿಯಾಗಲಿದೆ ಎಂದು ಹೇಳಿದರು.
ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿರುವ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆ ಮಾಡಲು ಗಮನ ಹರಿಸಲಾಗುತ್ತಿದೆ. ಬೀಳಗಿ ಹೆಸ್ಕಾಂ ಕಾರ್ಯಾಲಯ ಹಳೆಯದಾಗಿದ್ದು, ಅಂದಾಜು 1.35 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಶಂಕರ ಗೌಡಿ, ಮುಧೋಳ ಹೆಸ್ಕಾಂ ಕಾರ್ಯನಿವಾಹಕ ಇಂಜಿನಿಯರ್ ಸಚಿನ್ ಬೂದಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವೀರಣ್ಣ ಮರಕಟ್ಟಿ, ಸಹಾಯಕ ಕಾರ್ಯನಿರ್ವಾಹಕ ಪ್ರಭಾರ ಇಂಜಿನಿಯರ್ ಸಂತೋಷ ಹಳ್ಳಿ, ಸಿಪಿಐ ಸಂಜೀವ ಬಳೇಗಾರ, ಪಪಂ ಅಧ್ಯಕ್ಷ ಸಿದ್ದಲಿಂಗೇಶ ನಾಗರಾಳ, ಉಪಾಧ್ಯಕ್ಷ ಕಾಮೇಶ ದಂಧರಗಿ, ಸಂಗಪ್ಪ ಕಟಗೇರಿ, ರಾಮಣ್ಣ ಕಾಳಪ್ಪಗೋಳ, ಮೋಹನ ಜಾಧವ, ವಿಜಯಲಕ್ಷ್ಮೀ ಪಾಟೀಲ, ಎಂ.ಎಂ. ಶಂಭೋಜಿ, ಈರಣ್ಣ ಗಿಡ್ಡಪ್ಪಗೋಳ, ಜಗತನಾಯಕ ಕಣವಿ, ಶ್ರೀಶೈಲ ಯಂಕಂಚಿಮಠ, ಪಪಂ ಸದಸ್ಯರಾದ ಸಿದ್ದು ಮಾದರ, ಸಂತೋಷ ನಿಂಬಾಳ್ಕರ, ವಿಠ್ಠಲ ಬಾಗೇವಾಡಿ ಹಾಗೂ ಅನೇಕರು ಇದ್ದರು.