ಚಿತ್ರದುರ್ಗ: ಭಗವಂತನಲ್ಲಿ ಲೀನವಾಗಲು ಅಥವಾ ಮೋಕ್ಷ ಪ್ರಾಪ್ತಿಗೆ ಸಾಧಕರಾಗಬೇಕು. ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಂಡು ಪರೋಪಕಾರ ಮೈಗೂಡಿಸಿಕೊಳ್ಳಬೇಕು ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀ ಸಲಹೆ ನೀಡಿದರು.
ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹರಿವಾಯು ಗುರು ಸೇವಾ ಟ್ರಸ್ಟ್ನಿಂದ ಹರಿವಾಯುಸ್ತುತಿ ಪಾರಾಯಣ, ರಾಯರ ವರ್ಧಂತಿ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ಹರಿದಾಸ ಹಬ್ಬ’, ‘ಗುರು ರಾಘವೇಂದ್ರ ಸ್ವಾಮಿಯ 30ನೇ ಸಪ್ತಾಹದ’ ನಾಲ್ಕನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಗಣನಾಥ ಸಿದ್ಧಿಯ ದೈವ, ಮುಕುತಿ ಪಥಕ್ಕೆ ಮಹಾರುದ್ರ ದೇವ, ಹೀಗೆ ಪ್ರತಿ ದೇವರಿಂದ ಅನುಗ್ರಹ ದೊರೆಯಲಿದೆ. ಪರಮಾತ್ಮ ಮಾನವರೊಳಗಿದ್ದು, ಎಲ್ಲರಿಂದಲೂ ಒಂದಿಲ್ಲೊಂದು ಕರ್ತವ್ಯ ಮಾಡಿಸುತ್ತಿದ್ದಾನೆ ಎಂದರು.
ಗಣಪತಿ, ಲಕ್ಷ್ಮೀ, ಸರಸ್ವತಿ, ಪಾರ್ವತಿ, ಮಹಾಶಿವ ಸೇರಿ ನಾವುಗಳು ಯಾವ ದೇವರಿಗೆ ಪೂಜೆ ಸಲ್ಲಿಸಿದರೂ ಕೇಶವನಿಗೆ ಸಲ್ಲುತ್ತದೆ. ಸರ್ವೋತ್ತಮನಾದ ಮಹಾವಿಷ್ಣುವಿನ ಆರಾಧನೆ ಎಲ್ಲರೂ ಮಾಡಬೇಕು. ಇದರಿಂದ ಭಕ್ತರ ರಕ್ಷಣೆಯಾಗಲಿದೆ ಎಂದು ಸಲಹೆ ನೀಡಿದರು.
ಪುರುಷ ಸೂಕ್ತ ಮತ್ತು ಸೂಕ್ತ ಹೋಮ, ಗೋಪಾಲದಾಸರ ಮಾತಿನಲ್ಲಿ ವೈರಾಗ್ಯ ಕುರಿತು ಮತ್ತು ‘ದೇಹವೇ ದೇವಾಲಯ’ ಕುರಿತು ಪ್ರವಚನ, ವಾದಿರಾಜರ ಕೃತಿ ‘ಶ್ರೀಲಕ್ಷ್ಮೀ ಶೋಭಾನೆ’ ಕುರಿತು ಸಾಮೂಹಿಕ ಪಾರಾಯಣ, ಜೈ ವಾಸವಿ ಮಿತ್ರವೃಂದದಿಂದ ಶ್ರೀಕನಕದಾಸರ ಕೃತಿ ಕುರಿತು ಭಜನೆ, ದೇವತಾ ಚಿತ್ರಪಟಗಳ ಪ್ರದರ್ಶನದೊಂದಿಗೆ ದಾಸವಾಣಿ ನಡೆಯಿತು.
ಧರ್ಮ ಮಾರ್ಗದಿಂದ ಭಾರತ ಸುಭದ್ರ
ಸಂವಿಧಾನವನ್ನು ನಮ್ಮ ವ್ಯವಸ್ಥೆ ಹಾಗೂ ದಿನನಿತ್ಯದ ಕರ್ಮಕ್ಕೆ ಹೋಲಿಕೆ ಮಾಡುವ ಮೂಲಕ ಪೇಜಾವರ ಶ್ರೀಗಳು ಮಾರ್ಗದರ್ಶನ ನೀಡಿದ್ದು, ಅತ್ಯಂತ ಸೊಗಸಾಗಿತ್ತು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಸತ್ಕಾರ್ಯ, ಶ್ರೀರಾಮನ ಕುರಿತು ಸದ್ಭಕ್ತರಿಗೆ ಉಪದೇಶ ನೀಡಿದ್ದು, ವಿಶೇಷವಾಗಿತ್ತು. ಸಾವಿರಾರು ಜಾತಿ, ಕೋಟ್ಯಂತರ ದೇವರಿರುವ ದೇಶದಲ್ಲಿ ಸಣ್ಣ-ಪುಟ್ಟ ಜಗಳ ಬಂದರೂ, ದೇಶಕ್ಕೆ ಬೆಂಕಿ ಅಚ್ಚುವ ಕೆಲಸ ಕೆಲವರಿಂದ ಆದರೂ, ಧರ್ಮ ಭೋದನೆಯಿಂದಾಗಿ ರಾಷ್ಟ್ರ ಭದ್ರವಾಗಿದೆ ಎಂದು ತಿಳಿಸಿದರು.