ಬೆಂಗಳೂರು: ಸದ್ಯ ಚಿತ್ರರಂಗದಲ್ಲಿ ಎಲ್ಲೆಲ್ಲೂ ‘ಕಾಂತಾರ’ದ್ದೇ ಸುದ್ದಿ. ಒಂದು ಸಣ್ಣ ಪ್ರದೇಶದ ಬದುಕು-ಬವಣೆ ಆಧಾರಿತ ಕಥೆ ಈಗ ಜಗತ್ತಿನ ಮೂಲೆಮೂಲೆಗೂ ತಲುಪಿದ್ದು, ಭರ್ಜರಿ ಸ್ಪಂದನೆ ಸಿಗುವ ಜತೆಗೆ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಈ ಮೂಲಕ ಭಾಷೆ-ಪ್ರದೇಶದ ಹೊರತಾಗಿಯೂ ಉತ್ತಮ ಕಥೆ-ಮೇಕಿಂಗ್ ಇದ್ದರೆ ಸಿನಿಮಾದ ಗೆಲುವು ಖಚಿತ ಎಂಬ ಭರವಸೆಯನ್ನೂ ‘ಕಾಂತಾರ’ ಮೂಡಿಸಿದೆ.
ಈ ನಡುವೆ ‘ಕಾಂತಾರ’ದ ಯಶಸ್ಸು ರಿಷಬ್ ಶೆಟ್ಟಿಯ ನಟನೆ-ನಿರ್ದೇಶನ ಎರಡರ ಕುರಿತೂ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಮಾತ್ರವಲ್ಲ, ಈ ಚಿತ್ರ ರಿಷಬ್ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಜತೆಗೆ ಇನ್ನೊಂದು ಮಜಲಿಗೆ ಕೊಂಡೊಯ್ದಿದ್ದು ಕೂಡ ಸಾಬೀತಾಗಿದೆ. ಆ ಕುರಿತಾದ ಒಂದು ಸ್ಟೇಟಸ್ ಈಗ ವೈರಲ್ ಆಗುತ್ತಿರುವುದಲ್ಲದೆ, ಕಾಂತಾರದಿಂದ ರಿಷಬ್ ಸ್ಟೇಟಸ್ ಬದಲಾಗಿದ್ದಕ್ಕೂ ಸಾಕ್ಷಿಯಾಗಿದೆ.
ರಿಷಬ್ ಶೆಟ್ಟಿ ಚೊಚ್ಚಲ ನಿರ್ದೇಶನದ ಸಿನಿಮಾ ರಿಕ್ಕಿ 2016ರಲ್ಲಿ ತೆರೆ ಕಂಡಿತ್ತು. ಆದರೆ ಆ ಸಂದರ್ಭದಲ್ಲಿ ರಿಷಬ್ ಚಿತ್ರರಂಗಕ್ಕೆ ಅಷ್ಟೇನೂ ಚಿರಪರಿಚಿತವಲ್ಲದ್ದರಿಂದ ಮತ್ತು ನಿರ್ದೇಶಕನಾಗಿ ಹೊಸಬನಾದ್ದರಿಂದ ರಿಕ್ಕಿಗೆ ಸರಿಯಾಗಿ ಚಿತ್ರಮಂದಿರಗಳೇ ಸಿಕ್ಕಿರಲಿಲ್ಲ. ಕರಾವಳಿ ಮೂಲದ ಒಬ್ಬ ನಿರ್ದೇಶಕ ತನ್ನ ನಿರ್ದೇಶನದ ಸಿನಿಮಾಗಾಗಿ ಮಂಗಳೂರಿನಲ್ಲೇ ಶೋ ಕೊಡಿ ಎಂದು ಕೈಕಾಲು ಹಿಡಿಯವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಸ್ವತಃ ರಿಷಬ್ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದರು.
“ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನೆಮಾಸ್ನಲ್ಲಿ ನಾಳೆಯಿಂದ ಸಂಜೆ 7 ಗಂಟೆ ಶೋ ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್ ಬುಕ್ ಮಾಡಿ, ಥ್ಯಾಂಕ್ಯೂ..” ಎಂದು 2016ರ ಫೆ. 6ರಂದು ರಿಷಬ್ ಹಾಕಿದ್ದ ಫೇಸ್ಬುಕ್ ಸ್ಟೇಟಸ್ ಈಗ ಮುನ್ನೆಲೆಗೆ ಬಂದು ವೈರಲ್ ಆಗಲಾರಂಭಿಸಿದೆ.
ಅದಾದ ಮೇಲೆ ರಿಷಬ್ ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸಿದ್ದರು. ಅದು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಬಳಿಕ ನಿರ್ದೇಶನ ಮಾಡಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಕೊಡುಗೆ ರಾಮಣ್ಣ ರೈ’ ಕೂಡ ಭರ್ಜರಿ ಯಶಸ್ಸು ಪಡೆಯಿತು. ಈಗ ‘ಕಾಂತಾರ’ ರಿಷಬ್ ನಿರ್ದೇಶನದಲ್ಲಿ ತೆರೆಕಂಡಿರುವ ನಾಲ್ಕನೇ ಸಿನಿಮಾ. ಈ ಚಿತ್ರಕ್ಕೆ ಅವರ ನಿರ್ದೇಶನದ ಈ ಹಿಂದಿನ ಎರಡೂ ಚಿತ್ರಗಳಿಗೆ ಸಿಕ್ಕಿದ್ದಕ್ಕಿಂತಲೂ ಭರ್ಜರಿ ಸ್ಪಂದನೆ ಸಿಕ್ಕಿದೆ. ಸಿನಿಮಾ ಬಿಡುಗಡೆ ಆಗಿ ಮೂರು ದಿನ ಕಳೆದರೂ ಶೋ ಕಡಿಮೆ ಆಗುವ ಬದಲು ಹೆಚ್ಚಾಗಿವೆ. ಎಷ್ಟರಮಟ್ಟಿಗೆ ಎಂದರೆ ಬಹುತೇಕ ಸಿನಿಮಾ ಇನ್ನೂ ಹೌಸ್ಫುಲ್ ಆಗಿಯೇ ಪ್ರದರ್ಶನ ಕಾಣುತ್ತಿದ್ದು, ಹಲವೆಡೆ ಟಿಕೆಟ್ ಸಿಗುತ್ತಿಲ್ಲ. ಅದರಲ್ಲೂ ಅಂದು ಕೈಕಾಲು ಹಿಡಿದು ಶೋ ಕೊಡಿ ಎಂದು ಕೇಳಬೇಕಾಗಿದ್ದ ಅದೇ ಮಂಗಳೂರಿನಲ್ಲಿ ಈಗ ಎಲ್ಲ ಶೋಗಳೂ ಬುಕ್ ಆಗಿವೆ, ಟಿಕೆಟ್ ಸಿಗದಂತಾಗಿದೆ.
ಹೀಗೆ ‘ರಿಕ್ಕಿ’ ರಿಷಬ್ರನ್ನು ಲಕ್ಕಿ ಆಗಿಸಿದ ‘ಕಾಂತಾರ’ದ ಬಗ್ಗೆ, ನಿರ್ದೇಶನದ ಮೊದಲ ಸಿನಿಮಾದಿಂದ ನಾಲ್ಕನೇ ಸಿನಿಮಾದಲ್ಲಿ ಬದಲಾದ ಸ್ಟೇಟಸ್ ಬಗ್ಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತ ಮಾತನಾಡಿಕೊಳ್ಳಲಾರಂಭಿಸಿದ್ದು, ಕಾಲಾಯ ತಸ್ಮೈ ನಮಃ ಎಂದೂ ಹೇಳಲಾರಂಭಿಸಿದ್ದಾರೆ.
ಕಾಂತಾರ: ಶುಕ್ರವಾರಕ್ಕೂ ಭಾನುವಾರಕ್ಕೂ ಅಜಗಜಾಂತರ; ಭರ್ಜರಿ ರೆಸ್ಪಾನ್ಸ್ ಬಗ್ಗೆ ಇಲ್ಲಿದೆ ಅಧಿಕೃತ ಮಾಹಿತಿ