ಬೆಳಗಾವಿ: ನಮ್ಮಲ್ಲಿರುವ ಜ್ಞ್ಞಾನ ಹಾಗೂ ಆವಿಷ್ಕಾರಗಳ ರಕ್ಷಣೆಯ ಕುರಿತು ತಿಳಿದುಕೊಂಡು ಮುನ್ನಡೆಯಬೇಕು. ಹೊಸ ಆವಿಷ್ಕಾರಗಳು ಸಮಾಜ ಹಾಗೂ ಪರಿಸರದ ರಕ್ಷಣೆ ಮಾಡುವ ಆವಿಷ್ಕಾರವಾಗಿರಬೇಕೇ ಹೊರತು, ಸಮಾಜಕ್ಕೆ ಮಾರಕವಾಗಿರಬಾರದು ಎಂದು ಅಂಗಡಿ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ನಿರ್ದೇಶಕ ಮತ್ತು ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ ತಿಳಿಸಿದರು.
ನಗರದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ವ್ಯಾಪಾರ ಅಭಿವೃದ್ಧಿ ಉತ್ತೇಜನ ಕೇಂದ್ರಗಳ ವತಿಯಿಂದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಬೌದ್ಧಿಕ ಆಸ್ತಿ ಹಕ್ಕುಗಳು-ಸಾಧನಗಳು, ಸಂಶೋಧನೆ ಮತ್ತು ವ್ಯವಹಾರದಲ್ಲಿ ಅವುಗಳ ಮಹತ್ವ’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು ಅತ್ಯಂತ ಮಹತ್ವ ಹೊಂದಿವೆ. ಕೃತಿಸ್ವಾಮ್ಯ, ವ್ಯಾಪಾರ ಗುರುತು, ಭೌಗೋಳಿಕ ಸೂಚ್ಯಂಕಗಳ ಹಾಗೂ ಅವುಗಳ ರಕ್ಷಣೆಯ ಅತ್ಯಂತ ಮಹತ್ವದ ಪಾತ್ರವಹಿಸಿವೆ. ಇಂದಿನ ಯುವ ನ್ಯಾಯವಾದಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯ ಕ್ಷೇತ್ರದಲ್ಲಿ ಇರುವ ಉಜ್ವಲ ಅವಕಾಶಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಿ. ಜಯಸಿಂಹ ಮಾತನಾಡಿ, ವಿದ್ಯಾರ್ಥಿಗಳು ಬೌದ್ಧಿಕ ಆಸ್ತಿ ಹಕ್ಕು ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಸಂಯೋಜಕಿ ಪ್ರಭಾವತಿ ರಾವ್, ಬೆಂಗಳೂರು ಅಲ್ಟಾಸಿಟ್ ಗ್ಲೋಬಲ್ ಮುಖ್ಯಸ್ಥೆ ಸೌಮ್ಯಶ್ರೀ ಮತ್ತು ಬೆಂಗಳೂರಿನ ಭೌಗೋಳಿಕ ಸೂಚ್ಯಂಕಗಳ ಪರಿಶೀಲನೆ ವಿಭಾಗದ ವಿಶೇಷ ತಜ್ಞೆ ನಂದಿನಿ ದೊಲೇಪತ್ ವಿಶೇಷ ಉಪನ್ಯಾಸ ನೀಡಿದರು. ತೇಜಸ್ವಿನಿ ವಾವರೆ ಪ್ರಾರ್ಥಿಸಿದರು. ಡಾ.ಜ್ಯೋತಿ ಜಿ.ಹಿರೇಮಠ ಸ್ವಾಗತಿಸಿದರು. ತೇಜಸ್ವಿನಿ ಖಿಮಜಿ ನಿರೂಪಿಸಿದರು. ಡಾ.ಅಶ್ವಿನಿ ಹಿರೇಮಠ ವಂದಿಸಿದರು.