More

    ಬಿಸಿಲಿನ ತಾಪಮಾನ ಏರಿಕೆ; ಸಾಂಕ್ರಾಮಿಕ ರೋಗ ಭೀತಿ, ಇರಲಿ ಎಚ್ಚರ!

    ಅವಿನಾಶ್ ಜೈನಹಳ್ಳಿ ಮೈಸೂರು
    ಬೇಸಿಗೆಯ ಬಿಸಿಲಿನ ಪ್ರಖರತೆ ತಾರಕಕ್ಕೇರುತ್ತಿರುವ ಕಾರಣ ಜಿಲ್ಲೆಯಲ್ಲಿ ಮಹಾಮಾರಿ ಕರೊನಾ ಜತೆಗೆ ಇತರ ಸಾಂಕ್ರಾಮಿಕ ರೋಗಗಳು ಉಲ್ಬಣಿಸುವ ಭೀತಿ ಎದುರಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.

    ಈ ಬಾರಿ ಜಿಲ್ಲೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಡೆಂೆ, ಚಿಕೂನ್ ಗುನ್ಯಾ, ಕಾಲರಾ, ಟೈಫಾಯ್ಡ, ಮಲೇರಿಯಾ, ಚರ್ಮ ಕಾಯಿಲೆ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದೆ. ಮದುವೆ, ಹಬ್ಬ, ಹರಿದಿನ, ಜಾತ್ರೆ ಸೇರಿದಂತೆ ಹೆಚ್ಚಿನ ಜನರು ಸೇರುವ ಕಡೆಗಳಲ್ಲಿ ನೀರು ಮತ್ತು ಆಹಾರ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಗಳಿರುತ್ತವೆ.

    ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಸಾಂಕ್ರಾಮಿಕ ರೋಗಗಳ ಪ್ರಮುಖ ಲಕ್ಷಣಗಳು. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ, ಬಡಾವಣೆ/ಗ್ರಾಮದಲ್ಲಿ ಒಬ್ಬರಿಗೆ ಈ ಸಾಂಕ್ರಾಮಿಕ ರೋಗ ತಗುಲಿದರೂ ಮುಂದೆ ಹೆಚ್ಚು ಜನರಿಗೆ ಹರಡುವ ಸಾಧ್ಯತೆಗಳಿರುತ್ತವೆ.

    ರೋಗಗಳು ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಕಾಲದಲ್ಲಿ ಅವರನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಈ ಬಗ್ಗೆ ಅರಿವು ಮೂಡಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಿದ್ದಾರೆ.

    ಸಾಂಕ್ರಾಮಿಕ ರೋಗ ತಡೆ ಹೇಗೆ?:
    ಕುದಿಸಿ ಆರಿಸಿದ ನೀರು, ಶುದ್ಧವಾದ ಆಹಾರ ಪದಾರ್ಥ ಸೇವಿಸಬೇಕು. ಬಯಲಲ್ಲಿ ಮಲ ವಿಸರ್ಜನೆ ಮಾಡದೆ ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಹೋಟೆಲ್ಗಳಲ್ಲಿ ಶುದ್ಧವಾದ ಆಹಾರ ಮತ್ತು ಕುಡಿಯಲು ಬಿಸಿ ನೀರು ನೀಡಬೇಕು. ತ್ಯಾಜ್ಯ ವಸ್ತುಗಳನ್ನು ಗ್ರಾಮದ ಹೊರಗಡೆ ನಿಗದಿತ ಸ್ಥಳದಲ್ಲಿ ಹಾಕಬೇಕು. ಗ್ರಾಮದ/ಬಡಾವಣೆಯ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತೆರೆದಿಟ್ಟ ತಿಂಡಿ ತಿನಿಸುಗಳು ಮತ್ತು ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಊಟಕ್ಕೆ ಮುಂಚೆ ಹಾಗೂ ಮಲ ವಿಸರ್ಜನೆ ನಂತರ ಕೈಯನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ಸಡಿಲ ಹಾಗೂ ಹಗುರವಾಗಿರುವ ಹತ್ತಿ ಬಟ್ಟೆಗಳನ್ನು ತೊಡಬೇಕು.

    ನೀರಿಗೆ ಉಪ್ಪು, ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯಬೇಕು. ಬೆಳಗ್ಗೆ ಅಥವಾ ಸಂಜೆಯಾದರೂ ತಣ್ಣೀರು ಸ್ನಾನ ಮಾಡಬೇಕು. ಬಿಸಿ ವಾತಾವರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಶ್ರಮದ ಕೆಲಸ ಮತ್ತು ವ್ಯಾಯಾಮ ಮಾಡಬಾರದು. ಹಣ್ಣಿನ ರಸ, ಮಜ್ಜಿಗೆ, ಲಸ್ಸಿ, ನಿಂಬೆಹಣ್ಣಿನ ಪಾನೀಯ ಕುಡಿಯಬೇಕು. ಬೇಕರಿ ಪದಾರ್ಥ, ಪಾನೀಪುರಿ, ಗೋಬಿ ಮತ್ತಿತರ ತಿಂಡಿಗಳನ್ನು ತಿನ್ನಬಾರದು.
    ನೀರಿನಾಂಶ ಜಾಸ್ತಿ ಇರುವ ಸೌತೆಕಾಯಿ ಹೆಚ್ಚಾಗಿ ಸೇವಿಸಬೇಕು. ಟೀ, ಕಾಫಿ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು ಅಥವಾ ತ್ಯಜಿಸಿದರೆ ಇನ್ನೂ ಒಳ್ಳೆಯದು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಗೆ ಕ್ಯಾಪ್, ಮಹಿಳೆಯರು ಸ್ಕಾರ್ಪ್ ಧರಿಸಬೇಕು ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಎಸ್. ಚಿದಂಬರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

    ರೋಗಗಳು ಹರಡದಂತೆ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲೂ ಅರಿವು ಮೂಡಿಸಲಾಗುತ್ತಿದೆ. ಚರ್ಮ ರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಬೇರೆ ಬೇರೆ ಇಲಾಖೆಗಳ ಸಹಕಾರದೊಂದಿಗೆ ಕುಡಿಯುವ ನೀರು ಪರೀಕ್ಷೆ ಮಾಡಲಾಗುತ್ತಿದೆ.
    ಎಸ್. ಚಿದಂಬರ್, ಜಿಲ್ಲಾ ರೋಗ ವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts