ಸಾಗರ: ಕಾರ್ಮಿಕರನ್ನು ನೋಂದಾಯಿಸಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಕಾರ್ಮಿಕರ ಕಾರ್ಡ್ ದುರ್ಬಳಕೆಯಾಗದಂತೆ ಗಮನಹರಿಸಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆ ಮತ್ತು ನಗರಸಭೆಯ ನೂತನ ಕಸ ವಿಲೇವಾರಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯಲ್ಲಿ ಹೆಚ್ಚಿನ ಸೌಲಭ್ಯ ಸಿಗುತ್ತಿದ್ದು ಕಾರ್ಮಿಕರ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅನರ್ಹರ ಕೈಗೆ ಕಾರ್ಮಿಕ ಕಾರ್ಡ್ ಸಿಗಬಾರದು. ಕಾರ್ಮಿಕರಲ್ಲದವರು ಕಾರ್ಡ್ ಪಡೆದಿದ್ದರೆ ಇಲಾಖೆ ನಿರೀಕ್ಷಕರು ತಕ್ಷಣ ಅದನ್ನು ವಜಾಗೊಳಿಸಬೇಕು. ಕಾರ್ಮಿಕ ಸಂಘಟನೆಗಳು ಸಹ ಕಾರ್ಡ್ ಹಂಚಿಕೆ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದರು.
ಕಾರ್ಮಿಕರು ವಿಮೆ ಮಾಡಿಸುವತ್ತ ಗಮನ ಹರಿಸಬೇಕು. ಒಂದೊಮ್ಮೆ ನಿಮಗೆ ವಿಮೆ ಮಾಡಿಸಲು ಆಗಲಿಲ್ಲ ಎಂದರೆ ಹೇಳಿ, ವಿಮೆ ಕಂತು ಪಾವತಿಸುವತ್ತ ನಾವು ಗಮನ ಹರಿಸುತ್ತೇವೆ. ಸದನದಲ್ಲಿ ಕಾರ್ಮಿಕರಿಗೆ ವಿಮೆ ಪಾವತಿಸುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ಅಸಂಘಟಿತ ಕಾರ್ಮಿಕರ ಸಂಘಟನೆ ಮುಖ್ಯಸ್ಥ ಕೆ.ಸಿದ್ದಪ್ಪ ಮಾತನಾಡಿದರು. ಕಾರ್ಮಿಕ ನಿರೀಕ್ಷಕಿ ಶಿಲ್ಪಾ, ಪಾರ್ವತಿ, ಮಧುಮಾಲತಿ, ಗಣಪತಿ ಮಂಡಗಳಲೆ, ವಿ.ಶಂಕರ್ ಇತರರಿದ್ದರು.